ಚಿತ್ತ ಚೋರ
ನಿನ್ನ ಮುರಳಿಯ ಕರೆ
ನನ್ನ ಮನವನು ಸೆಳೆದು
ನಿನ್ನೊಲವ ಭಾವವನು ತಿಳಿಸಿತಂದು
ಒಲಿದು ಬಂದೆನು ನಿನ್ನ
ಪ್ರೇಮಗಾನ ದ ಕರೆಗೆ
ಮನವ ಕದ್ದು ಒಲವಪಡೆದೆ ನಾನಿಂದು
ಮನವ ಕದ್ದಿಹ ಚೋರ
ನೀ ಜತೆಯಲಿರಲು
ಒಂದೊಂದು ಕ್ಷಣವೂ
ಮದುರಾತಿ ಮಧುರ
ನೀನಿಲ್ಲದಾ ಕ್ಷಣವು
ನಿಮಿಷಗಳು ಯುಗಗಳಾಗಿ
ತುಂಬುತ್ತಿದೆ ಶೂನ್ಯಭಾವ
ಎಂದು ಬರುವೆಯೋ ನಲ್ಲ
ನಿನ್ನ ಒಲುಮೆಯ ಪಡೆದ
ನಾ ಧನ್ಯಳೆಂದು ಬೀಗಿದ್ದೆನಾಗ
ನೀ ನಡೆದೆ ನನ್ನೊಲವ ಕರೆಗೆ
ಕಿವುಡನಂದದೀಗ
ರಾಧೆಯೊಲುಮೆಗೆ ನೀ
ಮೌನವಾಗಿರುವಿಯೇಕೆ
ಮರೆತು ಹೋಯಿತೇ
ಆ ಮಧುರ ಕ್ಷಣವೂ
ಬೃಂದಾವನದ ಯಮುನಾ ತೀರದಲ್ಲಿ
ನಮ್ಮಿಬ್ಬರೊಡನಾಟಕ್ಕೆಯಾರ
ಕೆಟ್ಟ ಕಣ್ಣಿನ ದೃಷ್ಟಿ ತಗಲಿತೋ
ಅಗಲಿಕೆಯ ಈ ಕ್ಷಣವ ಸಹಿಸಲಾರೆ
ಕಾಯುತ್ತಿದೆ ತನು ಮನವು
ನಿನ್ನ ಒಲವಿನೊಡನಾಟಕ್ಕೆ
ಎಂದು ಬರುವೆಯೋ ಚಿತ್ತ ಚೋರ
ಶ್ರೀ ಕೃಷ್ಣ ಬೇಗ ಬಂದೆನ್ನ ತಣಿಸು
ಪಂಕಜಾ .ಕೆ. ಮುಡಿಪು ಕುರ್ನಾಡು
Comments
Post a Comment