ಚಿತ್ರ ಕವನ
ಮೋಹನ
ಎಲ್ಲಿ ಹೋದೆ ಚೆಲುವ ಕೃಷ್ಣ
ಕಾಯುತಿರುವುದು ಕಾಣದೆ
ನಿನ್ನ ದಾರಿ ಕಾದು ನಾನು
ಸೋತು ಹೋದೆ ತಿಳಿಯದೆ
ನಿನ್ನ ಮುರಳಿಗಾನದಲ್ಲಿ
ನನ್ನ ಸೆಳೆದು ತಂದೆಯ
ಅವಿತು ಈಗ ನೀನು ನನ್ನ
ಎನಿತು ಕಾಡುತಿರುವಿಯೋ
ಶಲ್ಯೆಯನ್ನು ಎಳೆದು ನೀನು
ತುಂಟತನವ ತೋರಿದೆ
ನಾಚಿಕೆಯು ತುಂಬಿ
ನನ್ನ ಕೆನ್ನೆ ಕೆಂಪೇರಿದೆ
ಬಯಕೆ ಬಿರಿದು ಎದೆಯ ತುಂಬಿ
ತನುವು ನಿನ್ನ ಸೇರ ಬಯಸಿದೆ
ಕಣ್ಣು ತುಂಬಾ ನಿನ್ನ ರೂಪ
ತುಂಬಿ ನಿಂತು ಕಾಡಿದೆ
ಹುಡುಗಾಟವಾಡಿ ನನ್ನ
ಏಕೆ ಹೀಗೆ ಕಾಡುವೆ
ಬೇಗ ಬಾರೋ ಕಾದು ಕಾದು
ತನುವು ಶಕ್ತಿ ಕುಂದಿದೆ
ಮುಖದ ನಗುವು ಕಣ್ಣ ಹೊಳಪು
ಮಾಸದಿರಲಿ ಪ್ರಿಯನೇ
ಕೆನ್ನೆ ತುಂಬಾ ಕೆಂಪು ಬಣ್ಣ
ಹೊಸ ಕಾಂತಿ ತಂದಿದೆ
ನಿನ್ನ ನೆನಪು ಮನವ ತುಂಬಿ
ನಿತ್ಯ ಕಾಡುತಿರುವುದು
ಕೋಗಿಲೆಯ ಉಲಿತದಲ್ಲೂ
ನಿನ್ನ ಮುರಳಿಗಾನವೇ ಕೇಳಿದೆ
ಚೈತ್ರಮಾಸ ಬಂದು ಈಗ
ಮನವ ಕೆಣಕುತಿರುವುದು
ನಿನ್ನ ಬಿಸಿ ಅಪ್ಪುಗೆಯಲಿ
ಕರಗಬೇಕು ಎನಿಸಿದೆ
ಬಾರೋ ಬೇಗ ಮುರಳಿ ಲೋಲ
ಮನವ ಕದ್ದ ಮೋಹನ
ಕಾಯುತಿರುವ ಕಷ್ಟವನ್ನು
ನೀನು ತಿಳಿಯಲಾರೆಯಾ
ಪಂಕಜಾ.ಕೆ.
Comments
Post a Comment