ಸುನಿಧಿ. (ಕಥೆ)
ರಾತ್ರಿ ತಾನು ಕಂಡ ಆ ಸುಂದರ ತರುಣಿಯು ಬಗ್ಗೆಯೇ ಯೋಚಿಸುತ್ತಿದ್ದ ವಿವೇಕನಿಗೆ ಆಫೀಸಿಗೆ ಹೋಗಬೇಕು ಎನ್ನುವುದೇ ಮರೆತು ಹೋಗಿತ್ತು.ವಿವೇಕನ ಅಮ್ಮ ದೀಪಾ ಬಂದು ಆತನನ್ನು ಎಚ್ಚರಿಸಿದಾಗ ಗಡಿಬಿಡಿಯಿಂದ ವಿವೇಕ್ ಬೇಗ ಬೇಗ ಸ್ನಾನ ತಿಂಡಿ ಮುಗಿಸಿ ಆಫೀಸಿಗೆ ಹೊರಡುತ್ತಾನೆ. ನಿನ್ನೆ ರಾತ್ರಿ ನೀನು ಬರುವಾಗ ತುಂಬಾ ತಡವಾಗಿತ್ತು ಇನ್ನೂ ನಿದ್ದೆಕಣ್ಣಿನಲ್ಲಿಯೇ ಇದ್ದಿಯಾ ಸ್ವಲ್ಪ ನಿಧಾನವಾಗಿ ಹೋಗು ಮಗ ಎಂದು ದೀಪಾ ಎಚ್ಚರಿಸುತ್ತಾಳೆ ವಿವೇಕ್ ಆಗಲಮ್ಮ ನಾನು ಬರುವೆ ಎಂದು ಅಮ್ಮನಿಗೆ ಟಾಟಾ ಮಾಡಿ ಕಾರು ಸ್ಟಾರ್ಟ್ ಮಾಡಿ ಹೊರಡುತ್ತಾನೆ. ದಾರಿಯಲ್ಲಿಯೂ ಆತನಿಗೆ ನಿನ್ನೆ ರಾತ್ರಿಯದೆ ಯೋಚನೆ
ವಿವೇಕ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸದಲ್ಲಿರುವ ಸುಂದರ ತರುಣ .ಇತ್ತೀಚೆಗೆ ತಾನೇ ಬೆಂಗಳೂರಿನ ಕಂಪನಿ ಬ್ರಾಂಚ್ ಗೆ ಎಂ.ಡಿ. ಯಾಗಿ ನೇಮಕ ಗೊಂಡಿದ್ದ , ಆತನಿಗೆ ಬೆಂಗಳೂರಿನಲ್ಲಿಯೇ ಸ್ವಂತ ಮನೆಯಿದ್ದು ,ತಂದೆ ತಾಯಿಯರ ಜತೆ ವಾಸಿಸುತ್ತಿದ್ದ ನಿತ್ಯ ಆಫೀಸಿಗೆ ಕಾರಿನಲ್ಲಿ ಹೋಗುವ ಆತ ಆದಿನ ತನ್ನ ತಂದೆಯ ಸ್ಕೂಟರ್ ನಲ್ಲಿ ಆಫೀಸ್ ಗೆ ಬಂದಿದ್ದ. ವಿಪರೀತ ಕೆಲಸವಿದ್ದ ಪ್ರಯುಕ್ತ ಆತ ಆಫೀಸಿನಿಂದ ಹೊರಗೆ ಬರುವಾಗ ಗಡಿಯಾರ ರಾತ್ರಿ 12 ಗಂಟೆಗೆ ಕೇವಲ 10 ನಿಮಿಷ ಇರುವುದನ್ನು ತೋರಿಸುತ್ತಿತ್ತು. ಇನ್ನೇನು ಆತ ಮನೆಗೆ ಹೋಗಬೇಕು ಎಂದು ತನ್ನ ಸ್ಕೂಟರ್ ನ್ನು ಹೊರಗೆ ತೆಗೆದು ಸ್ಟಾರ್ಟ್ ಮಾಡಿ ಮೈನ್ ರೋಡ್ ಗೆ ಬಂದಾಗ ,ಒಬ್ಬಳು ತರುಣಿ ಸ್ಕೂಟರ್ ಗೆ ಕೈ ಅಡ್ಡ ಹಿಡಿಯುತ್ತಿರುವುದು ಕಂಡು .ಆತ ಸ್ಕೂಟರ್ ನಿಲ್ಲಿಸಿದ .ತಕ್ಷಣ ಆಕೆ ವಿವೇಕನ ಹತ್ತಿರ ಬಂದು ತನಗಿಂದು ಆಫೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ತಡವಾಗಿರುವುದಾಗಿಯೂ, ತಾನು ಯಾವಾಗಲೂ ಹೋಗುವ ಬಸ್ ಹೊರಟು ಹೊಗಿರುವುದಾಗಿಯೂ ದಯವಿಟ್ಟು ನನ್ನನ್ನು ತನ್ನ ಮನೆಗೆ ಬಿಡುವಿರಾ ಎಂದು ಕೇಳುತ್ತಾಳೆ. ವಿವೇಕ್ ಒಂದು ಕ್ಷಣ ತಬ್ಬಿಬ್ಬಾಗುತ್ತಾನೆ, ಇಷ್ಟು ರಾತ್ರಿಯ ಹೊತ್ತು ಇಂತಹ ಸುಂದರ ಹೆಣ್ಣು ಒಂಟಿಯಾಗಿ ಹೋಗಲು ಸಾಧ್ಯವೇ ಪಾಪ ಏನು ಕಷ್ಟವೋ ಎಂದು ಮರುಗುತ್ತಾನೆ ಮೊದಲಿನಿಂದ ಮೃದು ಹೃದಯಿಯಾದ ಆತ ಆಕೆಯನ್ನು ಒಮ್ಮೆ ನಖಶಿಕಾಂತ ನಿಟ್ಟಿಸಿ ನೋಡುತ್ತಾನೆ.ಸಾಧಾರಣ. ಮೈಕಟ್ಟಿನ ಚಂದದ ಹುಡುಗಿ ಇಷ್ಟು ರಾತ್ರಿಯವರೆಗೂ ಕೆಲಸ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಆತನಿಗೆ ಕನಿಕರವಾಗುತ್ತದೆ.
ಆಕೆ ಹೋಗುವ ದಾರಿ ತನ್ನ ಮನೆಗೆ ಹೋಗುವ ದಾರಿಯೇ ಆದ್ದರಿಂದ ಆತ ಆಕೆಯನ್ನು ಕರೆದೊಯ್ಯಲು ಸಮ್ಮತಿಸುತ್ತಾನೆ. ಅವಳು ಒಂದು ಚಂದದ ನಗೆ ಬೀರಿ,ಆತನಿಗೆ ವಂದನೆ ಸಲ್ಲಿಸಿ ಆತನ ಹಿಂದೆ ಕುಳಿತುಕೊಳ್ಳುತ್ತಾಳೆ.
ಅಮಾವಾಸ್ಯೆಯ ಕತ್ತಲು ತುಂಬಿದ ರಾತ್ರಿ ಅವರು ಹೋಗುವ ದಾರಿಯಲ್ಲಿ ಮಳೆಯಿಂದಾಗಿ ಬೀದಿ ದೀಪಗಳು ಆರಿಹೋಗಿದ್ದು, ಅಗೊಂದು ಈಗೊಂದು ಬರುವ ವಾಹನ ಬಿಟ್ಟರೆ ಬೇರೆ ಜನಸಂಚಾರವಿಲ್ಲದೆ ರಸ್ತೆ ನಿರ್ಜನವಾಗಿತ್ತು. ವಿವೇಕ್ ಆಕೆಯನ್ನು ಮಾತಿಗೆಳೆಯುತ್ತಾ ಇಷ್ಟು ರಾತ್ರಿಯವರೆಗೆ ನೀನೇಕೆ ಕೆಲಸ ಮಾಡಬೇಕು ?ರಾತ್ರಿ ಹೀಗೆ ಒಂಟಿಯಾಗಿ ಹೋಗುವುದು ಸರಿಯೇ? ಕಾಲ ಸರಿಯಿಲ್ಲ ಸ್ವಲ್ಪ ಬೇಗನೆ ಮನೆಗೆ ಹೋಗಲು ಪ್ರಯತ್ನಿಸು ಎಂದು ಹೇಳುತ್ತಾನೆ.ಆಕೆ ತನ್ನ ಪರಿಸ್ಥಿತಿ ಯನ್ನು ವಿವರಿಸಿ ತಾನು ಕೆಲಸ ಮಾಡಲೇ ಬೇಕಾದ ಅನಿವಾರ್ಯತೆಯನ್ನು ವಿವರಿಸುತ್ತಾಳೆ. ವಿವೇಕ್ ಕನಿಕರದಿಂದ ಆಕೆಯನ್ನು ಸಮಾಧಾನಿಸುತ್ತಾನೆ . ಅವಳು ತಾನು ಇಳಿಯುವ ಸ್ಥಳ ಬಂತೆಂದು ಒಮ್ಮೆ ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸಬೇಕಾಗಿ ಕೇಳಿಕೊಳ್ಳುತ್ತಾಳೆ.ವಿವೇಕ್ ತನಗೆ ಮನೆಗೆ ಹೋಗಲು ತಡವಾಗುತ್ತದೆ ನನ್ನ ತಂದೆ ತಾಯಿ ನನ್ನ ದಾರಿ ಕಾಯುತ್ತಿರುತ್ತಾರೆ ಎಂದು ಎಷ್ಟೇ ಹೇಳಿದರೂ ಕೇಳದೆ ಒತ್ತಾಯದಿಂದ ತನ್ನ ಮನೆಗೆ ಕರೆದೊಯ್ದು ಕಾಪಿ ತಿಂಡಿ ಕೊಟ್ಟು ಉಪಚರಿಸುತ್ತಾಳೆ, ವಿವೇಕ್ ಹೊರಡಬೇಕೆಂದಿದ್ದಾಗ ಆಕೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ನಾನು ಡ್ರೆಸ್ ಬದಲಿಸಿ ಬರುತ್ತೇನೆ ಎಂದು ಹೇಳುತ್ತಾಳೆ . ವಿವೇಕ ಆಫೀಸ್ ಕೆಲಸದ ಆಯಾಸದ ಜತೆ ಹೊಟ್ಟೆ ತುಂಬಿದ್ದರಿಂದ ಸೋತು ಅಲ್ಲೇ ಸೋಫಾದಲ್ಲಿ ಮೈ ಚೆಲ್ಲುತ್ತಾನೆ. ಚೆನ್ನಾಗಿ ನಿದ್ದೆ ಬಂದಿರುತ್ತದೆ ,ಬೆಳಿಗ್ಗೆ ಎಚ್ಚರಿಕೆ ಯಾದಾಗ ಆತ ತನ್ನ ಮನೆಯಲ್ಲಿ ತನ್ನ ಹಾಸಿಗೆಯಲ್ಲೇ ಮಲಗಿರು ವುದು ಕಂಡು ಗಡಬಡಿಸಿ ಏಳುತ್ತಾನೆ ರಾತ್ರಿಯ ಘಟನೆ ಮರುಕಳಿಸಿ ತಾನು ಹೇಗೆ ಇಲ್ಲಿಗೆ ಬಂದೆ ಎಂದು ತಿಳಿಯದೆ ತಬ್ಬಿಬ್ಬಾಗುತ್ತಾನೆ,ತಂದೆ ತಾಯಿಯಲ್ಲಿ ವಿಚಾರಿಸಿದಾಗ ಅವರು ನೀನು ಸುಮಾರು 12.30 ಹೊತ್ತಿಗೆ ಎಂದಿನಂತೆ ಬಂದು ಊಟಮಾಡಿ ಮಲಗಿದ್ದಾಗಿ ತಿಳಿಸುತ್ತಾರೆ. ವಿವೇಕನಿಗೆ ಅಶ್ವರ್ಯವಾಗುತ್ತದೆ ಹಾಗಾದರೆ ನಿನ್ನೆ ನಾನು ಕಂಡಿದ್ದು ಕನಸೇ ಎಂದು ತಿಳಿಯದೆ ಯೋಚನೆಗೆ ಬೀಳುತ್ತಾನೆ. ಆದೇ ಯೋಚನೆಯಲ್ಲಿ ಕಾರು ಚಲಾಯಿಸುತ್ತ ಆತ ಆಫೀಸಿಗೆ ಬಂದಿದ್ದ
ನಿನ್ನೆ ರಾತ್ರಿಯದ್ದು ಕನಸೇ ಇರಬೇಕು ಎಂದು ಯೋಚಿಸಿದರೂ ದಾರಿಯಲ್ಲಿ ಆತನ ಮನಸ್ಸು ಆ ಹುಡುಗಿಯ ಬಗ್ಗೆಯೇ ಚಿಂತಿಸುತ್ತಿರುತ್ತದೆ ಆಕೆ ಯಾರು,ಅವಳು ಆ ಮನೆಯಲ್ಲಿ ಒಬ್ಬಳೇ ಇರುವುದೇ ,ಅವರ ಮನೆ ಸೋಫಾದಲ್ಲಿ ಮಲಗಿದ್ದ ನಾನು ಅದು ಹೇಗೆ ಮನೆಗೆ ಬಂದೆ ಎಂದು ಅಶ್ವರ್ಯ ಪಡುತ್ತಾನೆ. ನಡೆದ ಘಟನೆಯನ್ನು ತನ್ನ ಸ್ನೇಹಿತನೊಡನೆ ಹಂಚಿಕೊಳ್ಳುತ್ತಾನೆ. ಆತನ ಸ್ನೇಹಿತ ವಿವೇಕನನ್ನು ಅಭಿನಂದಿಸುತ್ತಾ ನಿನ್ನ ಅದೃಷ್ಟ ಒಳ್ಳೆದಿದೆ ಮಗ ರಾತ್ರಿ ಹೊತ್ತು ಆ ಹೆಣ್ಣಿನ ಜತೆ ಹೋದವರಾರು ಬದುಕಿ ಬಂದಿಲ್ಲ ಈ ಬಗ್ಗೆ ಪೇಪರಿನಲ್ಲೂ ಬಂದಿತ್ತು ಕೆಲಸದ ಒತ್ತಡದಲ್ಲಿ ನೀನು ಓದಿಲ್ಲವೆಂದು ಕಾಣುತ್ತದೆ ಎಂದು ಆತ ಹೇಳಿದ್ದು ಕೇಳಿ ವಿವೇಕನಿಗೆ ಮೈ ಬೆವರಿ ಒದ್ದೆಯಾಗುತ್ತದೆ
ವಿವೇಕ್ ಗೆಳೆಯ ಹೇಳಿದ್ದೇನೆಂದರೆ ಆಕೆ ಸುನಿಧಿ ಆ ಕಡೆಯ ಆಫೀಸ್ ನಲ್ಲಿ ಕೆಲಸದಲ್ಲಿದ್ದವಳು, ಬಡ ತಂದೆತಾಯಿಯ ಒಬ್ಬಳೇ ಮಗಳಾದ ಆಕೆ ತನ್ನ ತಂದೆ ತಾಯಿಯರಿಗಾಗಿ ಕೆಲಸಕ್ಕೆ ಸೇರಿರುತ್ತಾಳೆ. ಕೆಲಸಕ್ಕೆ ಸೇರಿದ ಕೆಲವೇ ಸಮಯದಲ್ಲಿ ಆಕೆಯ ಕೆಲಸ ಕಾರ್ಯದ ವೈಖರಿಗೆ ಮೆಚ್ಚಿ ಭಡ್ತಿಯಾಗಿ ದ್ದು, ಒಂದು ದಿನ ಆಕೆ ಕೆಲಸ ಮುಗಿಸಿ ಹೊರಬರುವಾಗ ತುಂಬಾ ತಡವಾಗಿತ್ತು ಆಕೆ ಹೋಗಬೇಕಾದ ಬಸ್ ಹೊರಟು ಹೋಗಿತ್ತು ಏನು ಮಾಡುವುದೆಂದು ದಿಕ್ಕು ತೋಚದೆ ನಿಂತಿದ್ದಾಗ ಒಂದು ಕಾರು ಬಂದು ಆಕೆಯ ಸಮೀಪ ನಿಲ್ಲುತ್ತದೆ ಆಕೆ ಮಾತನಾಡುವ ಮದಲೇ ಕಾರಿನಲ್ಲಿದ್ದವರು ಆಕೆಯನ್ನುಎಳೆದು ಕಾರಿಗೆ ಹಾಕಿಕೊಂಡು ಹೋಗುತ್ತಾರೆ.ಮರುದಿನ ಆಕೆಯ ಹೆಣ ಆ ಗುಡ್ಡದ ತಪ್ಪಲಲ್ಲಿ ಸಿಗುತ್ತದೆ
ಪೊಲೀಸ್ ಕೇಸ್ ಆದರೂ ಆಕೆಯ ತಂದೆ ತಾಯಿ ಬಡವರಾಗಿದ್ದು ಅಸಹಾಯಕರಾಗಿದ್ದುದರಿಂದ ಕೇಸನ್ನು ಮುಂದುವರಿಸಲಾಗಲಿಲ್ಲ . ಆದರೆ ಕೆಲವೇ ದಿನಗಳಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂದು ಸಂಶಯಿತರಾದವರೆಲ್ಲರೂ ಒಬ್ಬೊಬ್ಬರಾಗಿ ಅದೇ ತಪ್ಪಲಲ್ಲಿ ಸಾವನ್ನಪ್ಪಿದ್ದು ಆ ಸಾವು ಹೇಗಾಯಿತು ಎನ್ನುವುದು ಇಂದಿಗೂ ನಿಗೂಢವಾಗಿಯೇ ಇದೆ.ಅಲ್ಲದೆ ರಾತ್ರಿ ಹೊತ್ತು ಹೋಗುವ ಕೆಲವು ಗಂಡಸರೂ ಈ ರೀತಿ ಸಾವನ್ನಪ್ಪಿರುವುದಾಗಿ ಆತ ತಿಳಿಸುತ್ತಾನೆ .ಎಲ್ಲವನ್ನು ಕೇಳಿದ ವಿವೇಕ್ ಅದನ್ನು ನಂಬದೆ ಇದ್ದರೂ ತನ್ನ ಅನುಭವವು ಅದನ್ನು ನಂಬುವಂತೆ ಮಾಡಿತ್ತು. ಅಲ್ಲದೆ ತಾನು ಇಂದು ಬರುವಾಗ ನಿನ್ನೆ ತಾನು ನೋಡಿದ ಆ ಮನೆ ಅಲ್ಲಿ ಇಲ್ಲದೆ ಇರುವುದೂ ಸ್ನೇಹಿತನ ಮಾತಿಗೆ ಪುಷ್ಟಿ ಕೊಡುತ್ತದೆ
ವಿವೇಕನಿಗೆ ಮೈಯಲ್ಲಿ ಮೂರರ ಚಳಿ ಬಂದಂತೆ ಬೆವರು ತಲೆಯಿಂದ ಕಾಲಿನವರೆಗೆ ಇಳಿಯುತ್ತದೆ .ಅಂದರೆ ನಿನ್ನೆ ನನ್ನ ಜತೆ ಬಂದವಳು ಸುನಿಧಿಯ ದೆವ್ವವೇ ಎಂದು ಆತ ಭಯಪಡುತ್ತಾ ಕೇಳುತ್ತಾನೆ . ಹೌದು ಖಂಡಿತಾ ಅದು ಸುನಿಧಿಯ ದೆವ್ವ ಆಕೆ ನಿನ್ನನ್ನು ಏನು ಮಾಡದೆ ಬಿಟ್ಟಿದ್ದು ನನಗೆ ತುಂಬಾ ಅಶ್ವರ್ಯ ವಾಗುತ್ತಿದೆ ಎಂದು ಸ್ನೇಹಿತ ಹೇಳುತ್ತಾನೆ. ನಿನಗೆ ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಆಕೆಯ ಆಫೀಸ್ ನಲ್ಲಿ ಹೋಗಿ ವಿಚಾರಿಸು ಗೊತ್ತಾಗುತ್ತದೆ ಎಂದು ಹೇಳುತ್ತಾನೆ.
ವಿವೇಕ್ ಮರುದಿನ ಆಕೆಯ ಆಫೀಸಿಗೆ ಹೋಗಿ ವಿಚಾರಿಸಬೇಕು ಎಂದು ಅಲೋಚಿಸುತ್ತಾನೆ ಅದರಂತೆ ಮರುದಿನ ಆಕೆಯ ಆಫೀಸಿಗೆ ಹೋಗಿ ಸುನಿಧಿಯ ಬಗ್ಗೆ ವಿಚಾರಿಸಲು ಗೆಳೆಯ ಹೇಳಿದ್ದು ಸತ್ಯವೆಂದು ತಿಳಿದು ಬರುತ್ತದೆ.ಆದರೆ ಆಕೆಯ ಉದ್ದೇಶ ಏನಿರಬಹುದು ?ಆಕೆ ತನ್ನನ್ನು ಕೊಲ್ಲದೆ ಬದುಕಿಸಿದ ಕಾರಣವೇನಿರಬಹುದು ಎಂದು ಆತ ತನ್ನ ಸ್ನೇಹಿತನಲ್ಲಿ ವಿಚಾರಿಸುತ್ತಾನೆ.ಅದಕ್ಕೆ ಸ್ನೇಹಿತ ನೀನು ಅವಳನ್ನು ಮುಟ್ಟದೆ ಇರುವುದರಿಂದ ಇರಬಹುದು ಹೆಚ್ಚಿನ ಗಂಡಸರು ರಾತ್ರಿ ಒಂಟಿಯಾಗಿ ಹೆಣ್ಣೊಬ್ಬಳು ಸಿಕ್ಕರೆ ಅವಳನ್ನು ಬಲಾತ್ಕಾರ ಮಾಡದೆ ಬಿಡುವುದಿಲ್ಲ, ನೀನಾದರೊ ಬಹಳ ಮುಗ್ದ ನಿದ್ದೆ ಮಾಡಿಬಿಟ್ಟಿದ್ದಿಯಾ ಎಂದು ನಗೆಯಾಡುತ್ತಾನೆ ವಿವೇಕ್ ಆ ವಿಷಯವನ್ನು ಅಲ್ಲಿಗೆ ಮರೆತು ತನ್ನ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾನೆ
ಸುಮಾರು ಒಂದು ವಾರಕಳೆದ ಮೇಲೆ ಆ ದಿನ ವಿವೇಕ್ ಆಫೀಸಿನಿಂದ ಮನೆಗೆ ಹೋಗಬೇಕೆನ್ನುವಾಗ ಅದೇ ತರುಣಿ ಆತನ ಕಾರಿಗೆ ಕೈ ಅಡ್ಡ ಹಿಡಿದದ್ದು ನೋಡಿ ಆತ ಒಂದು ಕ್ಷಣ ಭಯಪಟ್ಟರೂ ಮರುಕ್ಷಣವೇ ಧೈರ್ಯದಿಂದ ಆಕೆಯ ಬಗ್ಗೆ ತಿಳಿಯಲೇ ಬೇಕೆನ್ನುವ ಉದ್ದೇಶದಿಂದ ಕಾರು ನಿಲ್ಲಿಸಿ ಮೇಡಂ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾನೆ.ಆಕೆ ತನ್ನ ಮನೆ ವಿಳಾಸ ಹೇಳಿ ದಯವಿಟ್ಟು ನನ್ನನ್ನು ಮನೆಗೆ ಬಿಡುವಿರಾ ನೀವೇ ಹೇಳಿದಂತೆ ರಾತ್ರಿ ಹೊತ್ತು ಒಂಟಿಯಾಗಿ ಹೋಗುವುದು ಒಳ್ಳೆಯದು ಅಲ್ಲ ಅಲ್ಲವೇ ನಿಮ್ಮ ಬಗ್ಗೆ ನನಗೆ ನಂಬಿಕೆಯಿದೆ ಆದ್ದರಿಂದ ದಯವಿಟ್ಟು ಈ ಒಂದು ಉಪಕಾರ ಮಾಡಿ ಎಂದು ಬೇಡಿಕೊಳ್ಳುತ್ತಾಳೆ.ವಿವೇಕ್ ಧೈರ್ಯ ಮಾಡಿ ಕಾರಿನಮುಂದಿನ ಬಾಗಿಲು ತೆಗೆದು ಅವಳನ್ನು ಕೂಡಿಸಿ ಕೊಳ್ಳುತ್ತಾನೆ.ತನ್ನ ಪಕ್ಕ ಕುಳಿತ ಆಕೆಯನ್ನು ಆತ ಕಾರು ಚಲಾಯಿಸುತ್ತಲೇ ವಾರೆ ಗಣ್ಣಿನಿಂದ ಗಮನಿಸುತ್ತಾನೆ. ಆಕೆ ಮಾಮೂಲಾಗಿ ಇರುವುದು ಕಂಡು ಸ್ವಲ್ಪ ಧೈರ್ಯ ಬಂದಂತಾಗಿ ಆಕೆಯ ಬಗ್ಗೆ ಅರಿಯಲು ಮಾತಿಗಿಳಿಯುತ್ತಾನೆ.ಆಕೆ ತನ್ನ ಹೆಸರು ಸುನಿಧಿ ತಾನು ಆ ಕಟ್ಟಡದಲ್ಲಿ ಕೆಲಸದಲ್ಲಿರುವುದಾಗಿಯೂ, ನನ್ನ ತಂದೆ ತಾಯಿ ಕಡು ಬಡವರು ಅವರಿಗೆ ನಾನಲ್ಲದೆ ಬೇರೆ ದಿಕ್ಕಿಲ್ಲ ಎಂದು ಹೇಳುತ್ತಾಳೆ ವಿವೇಕ ನಿನ್ನ ತಂದೆ ತಾಯಿ ನಿನ್ನ ಜತೆ ಇಲ್ಲವೇ ಎಂದು ಕೇಳುತ್ತಾನೆ ಆಗ ಅಕೆ ತಂದೆ ತಾಯಿ ಊರಿನಲ್ಲಿ ಇರುವುದಾಗಿಯೂ ತಾನು ಇತ್ತೀಚೆಗೆ ಇಲ್ಲಿ ಮನೆ ಮಾಡಿದ್ದಾಗಿ ತಿಳಿಸುತ್ತಾಳೆ. ಈ ದಿನ ತಂದೆ ತಾಯಿಯನ್ನು ನೋಡಬೇಕಾಗಿದೆ ನೀವು ದಯವಿಟ್ಟು ನನ್ನೊಡನೆ ಬರುವಿರಾ ಎಂದು ಕೇಳುತ್ತಾಳೆ ಅವಳು ತನ್ನ ಪರಿಚಯ ಹೇಳಿದಾಗಲೇ ಭಯಗ್ರಸ್ತನಾಗಿದ್ದ ವಿವೇಕ್ ಏನೂ ಹೇಳಲು ತೋರದೆ ಮೌನಿಯಾಗುತ್ತಾನೆ. ಅದನ್ನು ಕಂಡ ಆಕೆ ಇನ್ನೊಮ್ಮೆ ವಿನಂತಿಸಿ ಕೊಂಡಾಗ ಆತ ಸಮ್ಮತಿಸಿ ದಾರಿ ಸವೆಯಲೆಂದು ಆಕೆಯೊಡನೆ ಮಾತಿಗಿಳಿಯುತ್ತಾನೆ. ಮಾತಿನ ಸಂಧರ್ಭದಲ್ಲಿ ಆಕೆ ಗಂಡಸರು ಹೆಂಗಸರನ್ನು ಕಂಡರೆ ಅದೂ ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿ ಸಿಕ್ಕರೆ ಅವಳನ್ನು ಹಾಳು ಮಾಡದೆ ಬಿಡುವುದಿಲ್ಲ,ನನ್ನಂತಹ ಅಬಲೆ ರಾತ್ರಿಹೊತ್ತಿನಲ್ಲಿ ಸಂಚರಿಸುವುದು ಬಹಳ ಕಷ್ಟ ಎಂದು ತನ್ನ ದುಃಖ ತೋಡಿಕೊಳ್ಳುತ್ತಾಳೆ. ಆದರೆ ನೀನೊಬ್ಬ ಮಾತ್ರ ಇದಕ್ಕೆ ಅಪವಾದವಾಗಿದ್ದಿ ಆದ್ದರಿಂದವೇ ನಿನ್ನನ್ನು ನನ್ನ ತಂದೆ ತಾಯಿಗೆ ಪರಿಚಯಿಸಲು ಕರೆದೊಯ್ಯುತ್ತಿದ್ದೇನೆ ಎಂದು ಹೇಳುತ್ತಾಳೆ.
ವಿವೇಕ್ ಏನು ಹೇಳದೆ ಯೋಚಿಸುತ್ತಾನೆ ಏನಿರಬಹುದು ಈಕೆಯ ಉದ್ದೇಶ ನನ್ನನ್ನು ಕೊಲ್ಲುವುದಂತೂ ಅಲ್ಲ ಕೊಲ್ಲಬೇಕಿಂದಿದ್ದರೆ ಇಷ್ಟರಲ್ಲಾಗಲೇ ಕೊಲ್ಲುತ್ತಿದ್ದಳು ಬೇರೇನಾದರು ಉದ್ದೇಶವಿರಬಹುದು ನೋಡೋಣ ಈಕೆಯನ್ನು ನೋಡುವಾಗ ದೈವದಂತೆ ಕಾಣುವುದಿಲ್ಲ ಏನಾದರಾಗಲಿ ಅವಳನ್ನು ಅವಳು ಹೇಳಿದ ಸ್ಥಳಕ್ಕೆ ಬಿಡುವುದು ಸೂಕ್ತ ಒಂಟಿ ಹೆಣ್ಣನ್ನು ನಡು ದಾರಿಯಲ್ಲಿ ಈ ರಾತ್ರಿ ಹೊತ್ತು ಇಳಿಸುವುದು ಸರಿಯಲ್ಲ ಎಂದು ಅವಳು ಹೇಳಿದ ಕಡೆ ಕಾರು ಓಡಿಸುತ್ತಾನೆ. ಸುಮಾರು ಕಾಲು ಗಂಟೆಯ ನಂತರ ಒಂದು ಪುಟ್ಟದಾದ ಮನೆಯ ಬಳಿ ಕಾರು ನಿಲ್ಲಿಸಲು ಸುನಿಧಿ ಹೇಳುತ್ತಾಳೆ. ಕಾರು ನಿಂತ ಸ್ವರ ಕೇಳಿ ಆಕೆಯ ವೃದ್ಧ ತಂದೆ ತಾಯಿಯರು ಹೊರಗೆ ಬರುತ್ತಾರೆ . ಆತ ಆಕೆಯ ಜತೆ ನೀವು ಹೋಗಿ ನಾನು ಆದಷ್ಟು ಬೇಗ ಮನೆ ತಲುಪಬೇಕಿದೆ ನಾಳೆ ಭೇಟಿಯಾಗೋಣ ಎನ್ನುತ್ತಾನೆ.ಆದರೆ ಆಕೆ ಒತ್ತಾಯದಿಂದ ಅವನನ್ನು ಮನೆ ಒಳಗೆ ಕರೆದೊಯ್ಯುತ್ತಾಳೆ. ವೃದ್ಧ ದಂಪತಿಯರು ವಿವೇಕನನ್ನು ಕಂಡು ಯಾರು ನೀವು ಎಂದು ವಿಚಾರಿಸಲಾಗಿ ಆತ ಎಲ್ಲವನ್ನೂ ಅವರಿಗೆ ಹೇಳುತ್ತಾನೆ, ಆ ವೃದ್ಧ ದಂಪತಿಗಳ ಕಣ್ಣಿಂದ ನೀರು ಧಾರಾಕಾರವಾಗಿ ಸುರಿಯುತ್ತದೆ ,ಅವರು ಕುಸಿದು ಕುಳಿತು ಕೊಳ್ಳುತ್ತಾರೆ .ವಿವೇಕ್ ಗಾಬರಿಯಿಂದ ಅವರನ್ನು ಹಿಡಿದೆತ್ತಿ ಸಮಾಧಾನಿಸುತ್ತಾನೆ ಅಷ್ಟರಲ್ಲೇ ಸಮಾಧಾನಗೊಂಡ ಅವರು ತಮ್ಮ ಮಗಳ ಬಗ್ಗೆ ಎಲ್ಲಾ ವಿಷಯ ಹೇಳಿ ಕಣ್ಣೀರಾಗುತ್ತಾರೆ .ವಿವೇಕ್ ತಟ್ಟನೆ ಹಿಂತಿರುಗಿ ನೋಡುತ್ತಾನೆ. ಅಲ್ಲಿ ಯಾರೂ ಇಲ್ಲದೆ ಇರುವುದು ಕಂಡು ಆತನಿಗೆ ಭಯವಾಗುತ್ತದೆ ಈ ಬಗ್ಗೆ ಆಕೆಯ ತಂದೆ ತಾಯಿಯರನ್ನು ವಿಚಾರಿಸಲು ಅವರು ಕಣ್ಣೀರು ಒರಸಿಕೊಂಡು ಆಕೆ ಸೇಡು ತೀರಿಸಿಕೊಳ್ಳಲು ದೈವ್ವ ವಾಗಿರುವುದು ತಮಗೆ ತಿಳಿದಿದೆ ಆದರೆ ತಾವೇನೂ ಮಾಡಲಾರದ ಅಸಹಾಯಕರೆಂದು ದುಃಖಿಸುತ್ತಾರೆ ಆಗ ವಿವೇಕ್ ಅವಳಿಗೆ ನಿಮ್ಮದೇ ಯೋಚನೆ ಇರಬಹುದು ನೀವೇನೂ ಚಿಂತಿಸಬೇಡಿ ನೀವು ನನಗೂ ಅಮ್ಮ ಅಪ್ಪನಿದ್ದಂತೆ ನಿಮ್ಮ ಮುಂದಿನ ಜೀವನದ ಜವಾಬ್ದಾರಿ ನನ್ನದು ಬನ್ನಿ ನಮ್ಮ ಮನೆಗೆ ಹೋಗೋಣ ನನ್ನ ತಂದೆ ತಾಯಿಯರ ಜತೆ ನೀವು ಇರಬಹುದು ಎನ್ನುತ್ತಾನೆ. ಆದರೆ ಅವರು ನಾವು ಈ ಮನೆ ಬಿಟ್ಟು ಬರಲಾರೆವು ನೀನು ಆಗಾಗ ಬಂದು ಹೋದರೆ ಸಾಕು ಎಂದು ಹೇಳುತ್ತಾರೆ. ಈ ದಿನ ಇಲ್ಲಿಯೇ ಇರು ಎಂದು ಅವರು ಒತ್ತಾಯ ಮಾಡಿದಾಗ ವಿವೇಕ್ ಏನೂ ಹೇಳಲು ತೋರದೆ ಒಂಟಿಯಾಗಿ ತನ್ನ ಮನೆಗೆ ಹೋಗಲು ಹೆದರಿ ಅಲ್ಲಿಯೇ ರಾತ್ರಿ ಕಳೆಯಲು ನಿರ್ಧರಿಸುತ್ತಾನೆ. ಮತ್ತು ಅವರ ಜತೆ ಮಾತನಾಡುತ್ತಾ ಅಲ್ಲಿಯೇ ನಿದ್ರಿಸುತ್ತಾನೆ.ರಾತ್ರಿ ಒಂದು ಹೊತ್ತಿನಲ್ಲಿ ಎಚ್ಚರಿಗೆಯಾದಾಗ ವಿವೇಕನಿಗೆ ಎಂದಿನಂತೆ ತಾನು ತನ್ನ ಮನೆಯ ಮಂಚದಲ್ಲಿ ಇರುವುದು ತಿಳಿದು ಅಶ್ವರ್ಯ ವಾಗುತ್ತದೆ,ತಾನು ಕಂಡಿದ್ದು ಕನಸಿರಬಹುದೇ ಎಂದು ತಿಳಿಯದೆ ಗೊಂದಲದಲ್ಲಿ ಬೀಳುತ್ತಾನೆ. ಈ ಬಗ್ಗೆ ತಾನು ವಿಚಾರಿಸಲೇ ಬೇಕು ಎಂದು ನಿರ್ಧರಿಸಿ ಬೆಳಗಾದ ತಕ್ಷಣ ಆಮ್ನ ಅಪ್ಪನಿಗೂ ತಿಳಿಸದೆ ಕಾರು ತೆಗೆದುಕೊಂಡು ತಾನು ನಿನ್ನೆ ಹೋದ ದಾರಿಯಲ್ಲಿ ಹೋಗಿ ಆ ಮನೆ ತಲಪುತ್ರಾನೆ ಆದರೆ ಆ ಮನೆಯ ಸುತ್ತುಮುತ್ತ ಹುಲ್ಲು ಬೆಳೆದಿದ್ದು ಮನೆಯಲ್ಲಿ ಯಾರೂ ಇರುವ ಸೂಚನೆ ಕಾಣದಾದಾಗ ಆತ ಸುತ್ತಮುತ್ತ ನೋಡುತ್ತಾನೆ. ಅನತಿ ದೂರದಲ್ಲಿ ಒಂದು ಪೆಟ್ಟಿಗೆ ಅಂಗಡಿಯನ್ನು ಕಂಡು ವಿವೇಕ್ ಆ ಕಡೆ ಹೆಜ್ಜೆ ಹಾಕಿ ಆ ಅಂಗಡಿಯವರಲ್ಲಿ ಆ ಮನೆಯ ಬಗ್ಗೆ ವಿಚಾರಿಸಿದಾಗ ಅಂಗಡಿಯ ಯಜಮಾನ ಆ ಮನೆಯ ಬಗ್ಗೆ ಹೇಳಿದ್ದು ಕೇಳಿ ವಿವೇಕ್ ವಿಸ್ಮಿತನಾಗುತ್ತಾನೆ ಯಾಕೆಂದರೆ ತನ್ನ ಸ್ನೇಹಿತ ಹೇಳಿದ ಅದೇ ಕಥೆಯನ್ನು ಅವನೂ ಹೇಳಿದ್ದ. ವಿವೇಕ್ ಏನಾದರಾಗಲಿ ಒಮ್ಮೆ ಆ ಮನೆಯ ಒಳಗೆ ಹೋಗಿ ನೋಡಿ ಬರುವ ಎಂದು ಪುನಃ ಆ ಮನೆ ಹತ್ತಿರ ಹೋಗಿ ಬಾಗಿಲು ಬಡಿದಾಗ ಒಳಗಿನಿಂದ ಸಣ್ಣಗೆ ನರಳುವ ಧ್ವನಿ ಕೇಳಿ ವಿವೇಕ್ ಬಲವಾಗಿ ಬಾಗಿಲನ್ನು ನೂಕುತ್ತಾನೆ ಚಿಲಕಹಾಕಿಲ್ಲದ ಬಾಗಿಲು ದೊಡ್ಡ ಶಬ್ದ ಮಾಡುತ್ತಾ ತೆರೆದು ಕೊಳ್ಳುತ್ತದೆ. ವಿವೇಕ್ ನರಳುವ ಶಬ್ದ ಬಂದ ಕಡೆ ಹೋದಾಗ ಅಲ್ಲಿ ಹಾಸಿಗೆಯೊಂದರಲ್ಲಿ ಮಲಗಿದ್ದ ಕೃಶಕಾಯಳಾದ ವೃದ್ಧೆಯನ್ನು ಕಂಡು ಆತ ತಕ್ಷಣ ಆಕೆಯತ್ತ ನಡೆದು ಆಕೆಗೆ ನೀರು ಕುಡಿಸಿ ಉಪಚರಿಸುತ್ತಾನೆ.ಆಕೆ ಕೋಣೆಯ ಇನ್ನೊಂದು ಮೂಲೆಯತ್ತ ಕೈ ತೋರಿಸಿದಾಗ ,ಅಲ್ಲಿ ನೋಡಲು ವೃದ್ಧರೊಬ್ಬರು ಗೋಡೆಗೆ ಒರಗಿ ಎತ್ತಲೋ ನೋಡುತ್ತಾ ಕುಳಿತಿರುವುದು ಕಂಡು ವಿವೇಕ್ ಅವರ ಹತ್ತಿರ ಹೋಗಿ ಅವರ ಮೈ ದಡವಿ ಅವರಿಗೂ ಸ್ವಲ್ಪ ನೀರು ಕುಡಿಸಿ ಅವರಿಬ್ಬರನ್ನು ತನ್ನ ಕಾರಿನಲ್ಲಿ ಕೂರಿಸಿ ನಗರದ ಆಸ್ಪತ್ರೆಗೆ ಸೇರಿಸುತ್ತಾನೆ.ಅಲ್ಲಿ ಅವರಿಗೆ ಒಳ್ಳೆಯ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಿ ಆತ ಪುನಃ ಆ ಮನೆಯ ಕಡೆ ಬರುತ್ತಾನೆ .ವಿವೇಕ್ ಅಲ್ಲಿಗೆ ಬಂದಾಗ ಸುನಿಧಿ ಅಲ್ಲಿ ಇದ್ದು ಅವನಿಗೆ ಕೃತಜ್ಞತೆಯನ್ನು ತಿಳಿಸುತ್ತಾಳೆ. ಆಗ ವಿವೇಕ್ ಸುನಿಧಿ ನಿನ್ನ ಬಗ್ಗೆ ನನಗೆ ಎಲ್ಲಾ ತಿಳಿಯಿತು ನೀನು ಇನ್ನು ಮುಂದೆ ಯಾರಿಗೂ ತೊಂದರೆ ಕೊಡಬಾರದು , ನಿನ್ನ ತಂದೆ ತಾಯಿ ಯನ್ನು ನೋಡಿಕೊಳ್ಳುವ ಜವಾಬ್ಧಾರಿ ನನ್ನದು ,ಅಲ್ಲದೆ ಈ ಮನೆಯನ್ನು ಒಂದು ವೃದ್ಧಾಶ್ರಮ ಮಾಡಿ ಅನಾಥ ವೃದ್ಧರಿಗೆ ನಾನು ಆಶ್ರಯ ಕೊಡುತ್ತೇನೆ ಎಂದು ಮಾತು ಕೊಡುತ್ತಾನೆ. ಅದರಂತೆ ವಿವೇಕ್ ಆ ಮನೆಯನ್ನು ಒಂದು ವೃದ್ಧಾಶ್ರಮ ಮಾಡಿ ಅಲ್ಲಿ ಅನಾಥ ವೃದ್ಧರ ಬಾಳಿಗೆ ಬೆಳಕಾಗುತ್ತಾನೆ ಸುನಿಧಿ ಯ ತಂದೆ ತಾಯಿ ಗುಣಮುಖರಾಗಿ ಬಂದು ವಿವೇಕನ ಜತೆ ಕೈಗೂಡಿಸುತ್ತಾರೆ . ಅದರ ನಂತರ ಸುನಿಧಿ ಯಾರಿಗೂ ಕಾಣಿಸಲೇ ಇಲ್ಲ .ಅತೃಪ್ತ ಆತ್ಮಗಳು ತಮ್ಮವರಿಗಾಗಿ ತುಡಿಯುವುದು ಸತ್ಯ ಎನ್ನುವುದು ವಿವೇಕನಿಗೆ ತಿಳಿಯುತ್ತದೆ.
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟಮಾಸ್ಟರ್. ಶ್ರೀಗಣೇಶಕೃಪಾ.ಮುಡಿಪು.ಅಂಚೆ. ಕುರ್ನಾಡು ದ.ಕ.574153
Comments
Post a Comment