ಮಕ್ಕಳ ನೀತಿ ಕಥೆ
ಸೋಮಾರಿ ಶಿವ
ಒಂದು ಊರಿನಲ್ಲಿ ಶಿವ ಎಂಬ ತರುಣನಿದ್ದ ಸ್ಪುರದ್ರೂಪಿಯೂ, ಗಟ್ಟಿಮುಟ್ಟಾಗಿಯೂ ,ಇದ್ದ ಆತನು ತುಂಬಾ ಸೋಮಾರಿಯಾಗಿದ್ದನು. ಮತ್ತು ಯಾವಾಗಲೂ ತಾನು ಬಡವ ತನ್ನದು ಕೆಟ್ಟ ಅದೃಷ್ಟವೆಂದು ಬೇಸರಿಸುತ್ತಿದ್ದನು. ಊರಿನ ಎಲ್ಲರೂ ಆತನನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದರು.
ಒಂದು ದಿನ ಆತ ಬೇಸರದಿಂದ ಊರಿನ ಹೊರಗೆ ತಿರುಗಾಡುತ್ತಿರುವಾಗ ಅವನಿಗೆ ಒಬ್ಬ ಶ್ರೀಮಂತ ವರ್ತಕ ಭೇಟಿಯಾಗುತ್ತಾನೆ. ಆತ ಶಿವನನ್ನು ನೋಡಿ ನೀನು ಬಹಳ ದುಃಖಿತನಂತೆ ಕಾಣುತ್ತಿದ್ದಿಯೇ ಯಾಕೆ ಎಂದು ವಿಚಾರಿಸುತ್ತಾನೆ. ಶಿವನು ತನ್ನ ಬಡತನದ ಬಗ್ಗೆ ಹೇಳಿ ಬೇಸರಿಸುತ್ತಾನೆ. ಅವನ ಮಾತುಗಳನ್ನು ಕೇಳಿದ ವರ್ತಕ ಇಷ್ಟು ಗಟ್ಟಿಮುಟ್ಟು ದೇಹ ಇದ್ದರೂ ಸೋಮಾರಿಯಾಗಿ ಇರುವ ಇವನಿಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿ ಅವನನ್ನು ತನ್ನ ಜತೆ ಕರೆದೊಯ್ಯುತ್ತಾನೆ .ಮನೆಗೆ ಹೋದ ಮೇಲೆ ವರ್ತಕ ನಿನಗೆ ಬೇಕೆನಿಸಿದಷ್ಟು ದುಡ್ಡು ತೆಗೆದುಕೊ , ಆದರೆ ಅದಕ್ಕೆ ಪ್ರತಿಯಾಗಿ ನಿನ್ನ ಒಂದು ಕೈಯನ್ನು ನನಗೆ ಕತ್ತರಿಸಿ ಕೊಡಬೇಕು, ಎಂದು ಹೇಳಿದನು .ವರ್ತಕ ಹೇಳಿದ ಮಾತು ಕೇಳಿ ಶಿವನಿಗೆ ಗಾಬರಿಯಾಯಿತು. ಶಿವನು ಎಷ್ಟು ದುಡ್ಡು ಕೊಟ್ಟರೂ ನನ್ನ ಕೈಯನ್ನು ಕೊಡಲಾರೆ ಎಂದನು. ಆಗ ವರ್ತಕನು ನಿನ್ನ ಒಂದು ಕಾಲನ್ನಾದರೂ ಕೊಡು ನಿನಗೆ ಬೇಕಾದಷ್ಟು ಹಣ ಕೊಡುವೆ ಎಂದನು.ಆಗ ಶಿವನು ಕೋಪದಿಂದ ನೀನು ಎಷ್ಟೇ ದುಡ್ಡು ಕೊಟ್ಟರೂ ನನ್ನ ಕೈ ಕಾಲುಗಳನ್ನು ಕೊಡಲಾರೆ ಎಂದನು. ವರ್ತಕ ನಗುತ್ತಾ ನೀನು ಬಡವನಲ್ಲ, ನಿನ್ನ ಬಳಿ ದೇವರು ಕೊಟ್ಟ ಅಮೂಲ್ಯ ಆಸ್ತಿ ಇದೆ ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ . ದೇವರು ನಿನಗೆ ಕೊಟ್ಟ ಅಮೂಲ್ಯ ಅಸ್ತಿಯಲ್ಲಿ ಯಾವದೂ ಊನವಾಗಿಲ್ಲ ಹಾಗಿದ್ದರೂ ನೀನು ಈ ರೀತಿ ನಿರುತ್ಸ್ಸಾಹದಿಂದ ಇರುವುದು ಸರಿಯೇ ಎಂದು ಕೇಳುತ್ತಾನೆ. ಸೋಮಾರಿತನ ಬಿಟ್ಟು ದೇವರು ಕೊಟ್ಟ ಆಸ್ತಿಯನ್ನು ಉಪಯೋಗಿಸಿ ಸಂಪಾದನೆ ಮಾಡು ಎಂದು ಬುದ್ದಿ ಹೇಳುತ್ತಾನೆ ವರ್ತಕನ ಮಾತಿನಿಂದ ಶಿವನಿಗೆ ಜ್ಞಾನೋದಯವಾಗುತ್ತದೆ . ಆತ ತನ್ನ ಸೋಮಾರಿತನ ಬಿಟ್ಟು ಚೆನ್ನಾಗಿ ದುಡಿದು ಶ್ರೀಮಂತನಾಗುತ್ತಾನೆ.ಕಾಲಕ್ರಮೇಣ ಆತನು ಒಬ್ಬ ಗಣ್ಯ ವ್ಯಕ್ತಿಯಾಗುತ್ತಾನೆ.
ನೀತಿ..ಸೋಮಾರಿತನ ದೊಡ್ಡ ರೋಗ ಸೋಮಾರಿಯಾದವಣಿಗೆ ಎಲ್ಲಿಯೂ ಬೆಲೆಯಿಲ್ಲ
ಪಂಕಜಾ. ಕೆ. ಮುಡಿಪು
Comments
Post a Comment