ವಿಶ್ವಾಮಿತ್ರ ನ ತಪಸ್ಸು
ಬ್ರಹ್ಮರ್ಷಿ ಪಟ್ಟದ ಆಸೆಗೆಬಿದ್ದು
ಘೋರ ತಪಸ್ಸಿಗೆ ಕುಳಿತನಾರಾಜ
ಹಿಡಿದಿಹ ತಪವನು ನೋಡುತ ಬೆಚ್ಚಿದ
ದೇವತೆಗಳ ಒಡೆಯ ದೇವೇಂದ್ರ
ತಪವದು ಫಲಿತರೆ ಕಂಟಕ ತನಗಿದೆ
ಎನ್ನುತ ಚಿಂತಿಸಿದನಾ ದೇವೇಂದ್ರ
ವಿಶ್ವಾಮಿತ್ರರ ತಪವನು ಕೆಡಿಸಲು
ಕಳುಹಿಸಿದ ಸುರಸುಂದರಿ ಮೇನಕೆಯ
ಕುಳಿತಿಹ ಋಷಿಯನು ನೋಡುತ ಮನದಲಿ
ಭಯವದು ಸುಳಿಯಿತು ತರುಣಿಯಲಿ
ಹಕ್ಕಿಗಳಿಂಚರದ ಜತೆ ಇನಿದನಿ ಸೇರಿಸುತ
ತಪವನು ಕೆಡಿಸಲು ಹಾಡನು ಹಾಡಿದಳು
ಬಗೆ ಬಗೆ ನೃತ್ಯವ ಲಗುಬಗೆಯಿಂದಲಿ
ಮಾಡುತ ಋಷಿಯನು ಕೆಣಕಿದಳು
ಸುಳಿ ಸುಳಿಯುತ ಎಡೆಯಲಿ ಹಾಡುತ
ಕೆಡವಿದಳಾಕೆ ತನ್ನ ಮೋಹದ ಬಲೆಯಲ್ಲಿ
ಕಣ್ಣನು ಬಿಟ್ಟಿಹ ವಿಶ್ವಾಮಿತ್ರನು
ನೋಡಿದ ತರುಣಿಯ ಲಾಷ್ಯವನು
ತಪವನು ಬಿಟ್ಟು ತರುಣಿಯ ತಬ್ಬುತ
ದಿನಗಳ ಕಳೆದನು ಮೋದದಲಿ
ಪಂಕಜಾ.ಕೆ.
Comments
Post a Comment