.ವಿಶ್ವ ಪರಿಸರ ದಿನಕ್ಕಾಗಿ ಕವನ
ಮಾಡಿದ್ದುಣ್ಣೋ ಮಹರಾಯ
ಪರಿಸರ ಕಾಳಜಿ
ಮಂತ್ರವ ಜಪಿಸುತ
ಮರಗಿಡಗಳ ಕಡಿಯುವರು
ಗಿಡಗಳ ನೆಡುತಲಿ
ಫೋಟೋವ ಕ್ಲಿಕ್ಕಿಸಿ
ಪರಿಸರ ಪ್ರೇಮಿ ಎನಿಸುವರು
ರಸ್ತೆಯ ಬದಿಯಲಿ
ಬೆಳೆದಿಹ ಮರಗಳು
ದಾರಿಗರಿಗೆ ನೆರಳನು ಕೊಡುತಿಹುದು
ರಸ್ತೆಯ ಅಗಲೀಕರಣ
ಎನ್ನುವ ನೆಪದಲಿ
ಧರೆಗದು ಉರುಳಿತು ಬುಡದಿಂದ
ತಾನೇ ಶ್ರೇಷ್ಠ ಎನ್ನುವ
ಹಮ್ಮಿನಲಿರುತ
ಪರಿಸರ ಹಾಳು ಗೆಡವಿದನು
ಪ್ಲಾಸ್ಟಿಕ್ ತ್ಯಾಜ್ಯವ
ಮಣ್ಣಿಗೆ ಉಣಿಸಿ
ಮಣ್ಣಿನ ಹಾಳುಗೆಡವಿದನು
ತಿಳಿನೀರು ತುಂಬಿದ
ಕೆರೆಗಳ ಮುಚ್ಚುತ
ನದಿಗಳ ತಿರುಗಿಸಲು ಮುಂದಾದ
ನೀರಿನ ಕೊರತೆಯು
ಕಾಣಲು ಬೇಗನೆ
ಭೂತಾಯಿಯಒಡಲಿಗೆ ಕನ್ನವ ಹಾಕಿದನು
ಗಿಡಮರಗಳು
ಮಳೆಯ ನೀರನು
ಹಿಡಿದಿಡುತ ಕೆರೆಕಟ್ಟೆಗಳು ತುಂಬುತಿತ್ತು
ನೀರಿನ ಕೊರತೆಯು
ಆಗದ ತೆರದಲಿ
ನಮ್ಮನು ಅವುಗಳು ಕಾಯುತ್ತಿತ್ತು
ಹಸಿರಿನ ಕಾಡದು
ಉಸಿರನು ಕೊಡುತ
ಶುದ್ಧ ಗಾಳಿಯ ಕೊಡುತಿತ್ತು
ಅಭಿವೃದ್ಧಿಯ ಹೆಸರಿನಲಿ
ಮಾಡಿದ ಪಾಪಕೆ
ಮನೆಯಲ್ಲೇ ಬಂಧಿಯಾಗಿಹನೀಗ
ಉಳಿದರೆ ಪ್ರಕೃತಿ
ತನ್ನಯ ಉಳಿವು
ಎನ್ನುವುದ ಇನ್ನಾದರೂ ತಿಳಿ ನೀ ಮನುಜ
ಪಂಕಜಾ.ಕೆ.ಮುಡಿಪು
Comments
Post a Comment