ಶ್ರಾವಣ ಸಂಭ್ರಮ( ಲೇಖನ)
ಮಾಸಗಳಲ್ಲೆಲ್ಲಾ ಅತಿ ಹೆಚ್ಚು ಹಬ್ಬಗಳು ಬರುವ ಮಾಸವೆಂದರೆ ಅದು ಶ್ರಾವಣ. ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಸಾಲೇ ಬರುತ್ತದೆ.
ಭಾರತೀಯ ಸಂಸ್ಕೃತಿ ಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಹಬ್ಬಗಳು ಮನೆ ಮಂದಿಯರನ್ನು ಒಟ್ಟಾಗಿಸಿ ಸಂಭ್ರಮದ ವಾತಾವರಣವನ್ನು ಮನೆಯಲ್ಲಿ ತುಂಬುತ್ತದೆ .ಆಷಾಢದ ಬಿಸಿಲಿಗೆ ಬೇಸತ್ತ ಮನ ಶ್ರಾವಣದ ತಂಪನ್ನು ಅನುಭವಿಸುತ್ತ ತೆರೆದುಕೊಳ್ಳುತ್ತದೆ. ಮನುಷ್ಯರಿಗೆ ಮಾತ್ರವಲ್ಲದೆ ಪ್ರಕೃತಿಗೂ ಈ ಮಾಸ ಸಂಭ್ರಮದ ಮಾಸವಾಗಿದೆ.ಹಿತವಾದ ಮಳೆಯಿಂದ ನೆನೆದ ಪ್ರಕೃತಿಯು ಹಚ್ಚ ಹಸಿರಾಗಿ ಹಸಿರಿನ ಹಂದರವೇ ಹಾಸಿದಂತೆ ಕಣ್ಮನ ತಣಿಸುತ್ತದೆ .. ಆಗಾಗ ಇಣುಕುವ ಸೂರ್ಯನ ಹೊಂಬಿಸಿಲು ,ತುಂತುರು ಮಳೆಯಲ್ಲಿ ನೆನೆಯುವ ಆಹ್ಲಾದ, ಬಾನಿನಲಿ ತೇಲಿ ಬರುವ ಮೋಡಗಳ ದಂಡು,ಗಿಡ ಮರಗಳಲ್ಲಿ ತುಂಬಿದ ಹೂಗಳು ,ಅದರ ಮತ್ತೇರಿಸುವ ಪರಿಮಳ ಎಲ್ಲವೂ ನಮ್ಮನ್ನು ಕವಿಯಾಗಿಸುತ್ತದೆ.
ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬವೂ ವೈವಿದ್ಯತೆಯಿಂದ ಕೂಡಿದ್ದು, ಹಬ್ಬದ ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಶರೀರದ ರಕ್ಷಣೆಯನ್ನು ಮಾಡಲು ಸಹಕಾರಿಯಾಗಿದೆ. ಪೂಜೆ ವ್ರತ ಉಪವಾಸಗಳನ್ನು ಮಾಡುವುದರಿಂದ ಶರೀರದಲ್ಲಿ ತುಂಬಿದ ಕೆಟ್ಟ ಶಕ್ತಿಯು ಹೊರಟು ಹೋಗಿ ಸಾತ್ವಿಕತೆ ತುಂಬಿ ಬರುವುದು ಭೀಮನ ಅಮವಾಸ್ಯೆಯಿಂದಲೇ ಶ್ರಾವಣ ಮಾಸದ ಹಬ್ಬಗಳು ಪ್ರಾರಂಭವಾಗುತ್ತದೆ.
ಹಿಂದಿನ ಕಾಲದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗಿ ಸೇರಿ ಸಂಭ್ರಮಿಸುತ್ತಿದ್ದ ಹಬ್ಬಗಳು ಜಾಗತೀಕರಣದಿಂದಾಗಿ ಹಿಂದಿನಷ್ಟು ಸಂಭ್ರಮವಿಲ್ಲದಿದ್ದರೂ ಹೆಚ್ಚಿನ ಹಬ್ಬಗಳು ಮನೆ ಮಟ್ಟಿನ ಆಚರಣೆಯಾಗಿ ಉಳಿದಿದೆ ಮನೆ ಮಂದಿಯೆಲ್ಲಾ ಒಟ್ಟಾಗಿ ಸೇರಿ ಹಬ್ಬ ಆಚರಿಸುತ್ತಿದ್ದುದರಿಂದ ಒಗ್ಗಟ್ಟಿನ ಮನೋಭಾವ ಕೂಡಿ ಬಾಳುವ ಹಂಚಿ ತಿನ್ನುವ ಮನೋಭಾವ ಎಲ್ಲರಲ್ಲಿ ಇತ್ತು ಇತ್ತೀಚೆಗೆ ವಿಭಕ್ತ ಕುಟುಂಬ ಸಮಯಾಭಾವ ಇತ್ಯಾದಿ ಕಾರಣಗಳಿಂದ ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಂಡಿದೆ. ಈ ವರ್ಷದ ಶ್ರಾವಣ ಮಾಸದಲ್ಲಂತೂ ಯಾವುದೇ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಕೊರೊನಾ ಮಹಾಮಾರಿಯು ಅಡ್ಡಿಯಾಗಿರುವುದು ಒಂದು ದುರಂತ
ಪಂಕಜಾ.ಕೆ ಮುಡಿಪು.
27.7.2020
Comments
Post a Comment