ಕವಿ ಸಾಹಿತಿಗಳ ಜೀವಾಳ ಚಿತ್ರಕ್ಕೊಂದು ಕಥೆ
ವೃದ್ಧ ಮಾತೆಯ ನೋವು
ಗಂಡ ತೀರಿಹೋದ ಮೇಲೆ ಸಾವಿತ್ರಮ್ಮ ಎಳೆಯ ಮಗು ರಾಕೇಶನನ್ನು ಕಟ್ಟಿಕೊಂಡು ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಇನ್ನೂ ಎಳೇಹರೆಯದ ಆಕೆ ಗಂಡಸರ ಕೆಟ್ಟ ಕಣ್ಣುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾ ಮನೆಕೆಲಸ ಮಾಡಬೇಕಾದರೆ ಸಾಕು ಸಾಕಾಗುತ್ತಿತ್ತು.ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಬದುಕು ಬೇಸರವಾಗಿದ್ದುದುಂಟು ಆದರೆ ತಾನು ಸತ್ತರೆ ತನ್ನ ಮಗ ನಿರ್ಗತಿಕನಾಗುತ್ತಾನೆ,ಹಾಗಾಗಬಾರದು ಹೇಗಾದರೂ ಮಗನನ್ನು ಒಂದು ನೆಲೆಗೆ ಹಚ್ಚಬೇಕು ಎಂದು ದೃಢಸಂಕಲ್ಪದಿಂದ ಆಕೆ ತನ್ನೆಲ್ಲ ದುಃಖ ನುಂಗಿಕೊಂಡು ಕೆಲಸ ಮಾಡುತ್ತಿದ್ದಳು.ರಾಕೇಶನಾದರೊ ಜಾಣ ಅಮ್ಮನ ಕಷ್ಟ ತಿಳಿದ ಆತ ಸ್ವಲ್ಪ ದೊಡ್ಡವನಾದ ತಕ್ಷಣ ಶಾಲೆ ಮುಗಿದ ಮೇಲೆ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ತನ್ನ ಶಾಲಾಶುಲ್ಕಕ್ಕಾಗುವಷ್ಟು ಸಂಪಾದಿಸುತ್ತಿದ್ದ. ಜಾಣನಾಗಿದ್ದರಿಂದ ಅವನಿಗೆ ವಿದ್ಯಾರ್ಥಿವೇತನವೂ ಬರುತ್ತಿದ್ದುದರಿಂದ ಇದ್ದುದರಲ್ಲಿ ತಕ್ಕಮಟ್ಟಿಗೆ ತಾಯಿ ಮಗ ಆರಾಮವಾಗಿದ್ದರು. ರಾಕೇಶ್ ನ ವಿದ್ಯಾಭ್ಯಾಸ ಮುಗಿದು ಆತನಿಗೆ ಒಂದು ಒಳ್ಳೆಯ ಕೆಲಸ ಆದಾಗ ಅವನು ತಾಯಿಯನ್ನು ಇತರರ ಮನೆ ಕೆಲಸದಿಂದ ಬಿಡಿಸಿ ತನ್ನೊಡನೆ ಕರೆದು ಕೊಂಡು ಹೋದ ಅಲ್ಲಿ ಅವನನ್ನು ಮೆಚ್ಚಿ ಬಂದ ಹೆಣ್ಣು ರಶ್ಮಿ ಮನೆ ಮನ ಎರಡನ್ನು ಬೆಳಗಿ ಎಲ್ಲರ ಜತೆ ಹೊಂದಿಕೊಂಡು ಇದ್ದಳು ಇತ್ತೀಚೆಗೆ ಮಗಳು ಶ್ರಾವ್ಯ ಹುಟ್ಟಿದ ಮೇಲೆ ಅವಳು ಅತ್ತೆಯನ್ನು ತಾತ್ಸಾರದಿಂದ ಕಾಣುತ್ತಿದ್ದಳು. ವಯೋ ಸಹಜ ಕಾಯಿಲೆಯಿಂದಾಗಿ ಸಾವಿತ್ರಮ್ನನಿಗೆ ಈಗ ಮೊದಲಿನಂತೆ ಕೆಲಸ ಮಾಡಲು ಆಗುತ್ತಿರಲಿಲ್ಲ ಯಾವಾಗಲೂ ಸುಸ್ತು ಕಾಡುತ್ತಿತ್ತು .ಇದರಿಂದಾಗಿ ನಿತ್ಯ ರಶ್ಮಿ ರಾಕೇಶನಲ್ಲಿ ಜಗಳವಾಡುತ್ತಿದ್ದಳು.ಮೊಮ್ಮಗಳು ಶ್ರಾವ್ಯಳಿಗೆ ಮಾತ್ರ ಅಜ್ಜಿಯೆಂದರೆ ತುಂಬಾ ಪ್ರೀತಿ ಶಾಲೆಯಿಂದ ಬಂದ ತಕ್ಷಣ ಅಜ್ಜಿಯನ್ನು ಮಾತಾಡಿಸದೆ ಇದ್ದರೆ ಅವಳಿಗೆ ಸಮಾಧಾನವಿಲ್ಲ.
ದಿನಾ ಅಜ್ಜಿಯ ಕೈಯಲ್ಲಿ ಕಥೆಗಳನ್ನು ಕೇಳುತ್ರಾ ಮುದ್ದು ಮುದ್ದಾಗಿ ಮಾತನಾಡುವ ಮೊಮ್ಮಗಳೆಂದರೆ ಸಾವಿತ್ರಮ್ಮನಿಗೂ ಅಚ್ಚುಮೆಚ್ಚು.ಆ ದಿನ ಮಗ ಮತ್ತು ಸೊಸೆಯ ಜಗಳ ತಾರಕಕ್ಕೆ ಏರಿದ್ದು ಸೊಸೆ ಅತ್ತೆಯನ್ನು ವೃದ್ದಾಶ್ರಮಕ್ಕೆ ಸೇರಿಸುವವರೆಗೆ ಮೌನವ್ರತ ಕೈಕೊಳ್ಳುವುದಾಗಿ ಶಪಥ ಮಾಡಿದ್ದು ನೋಡಿ ತನ್ನಿಂದ ತನ್ನ ಮಗನ ಸಂಸಾರ ಮುರಿದು ಬೀಳುವುದು ಕಂಡು ದುಃಖ ದಿಂದ ಕಣ್ಣಲ್ಲಿ ನೀರು ಸುರಿಸುತ್ತಾ ಇರುತ್ತಾರೆ .ಶ್ರಾವ್ಯ ಅಜ್ಜಿಯ ಹತ್ತಿರ ಕಥೆ ಕೇಳಲೆಂದು ಬಂದಾಗ ಅಜ್ಜಿಯ ಕಣ್ಣಲ್ಲಿ ನೀರು ಬರುವುದು ಕಂಡು ಆಕೆ ತನ್ನ ಪುಟ್ಟ ಕರಗಳಿಂದ ಅಜ್ಜಿಯ ಕಣ್ಣನ್ನು ಒರೆಸುತ್ತಾ ,ಅಜ್ಜಿ ಅಳಬೇಡ ನಾನು ಇದ್ದೇನೆ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ.ಎಲ್ಲಿ ಅಜ್ಜಿ ನಗು ನೋಡೋಣ ಎಂದು ಅಜ್ಜಿಯ ಮಡಿಲಲ್ಲಿ ಕುಳಿತು ಕಚಗುಳಿಯಾಡುತ್ತಾಳೆ . ತನ್ನ ಪುಸ್ತಕವನ್ನು ಅಜ್ಜಿಯ ಕೈಯಲ್ಲಿ ಕೊಟ್ಟು ಕಥೆಹೇಳಲು ಹೇಳುತ್ತಾಳೆ.ಅಜ್ಜಿಯ ಕೈ ಪುಸ್ತಕದ ಮೇಲೆ ಆಡುತ್ತಿದ್ದರೂ ಮನಸ್ಸಿನಲ್ಲಿ ಮಾತ್ರ ತನ್ನದೇ ಕಥೆ ರಿಂಗಣಿಸುತ್ತಿದ್ದು ಅದನ್ನೇ ಮೊಮ್ಮಗಳಿಗೆ ಹೇಳುತ್ತಾ ಕಣ್ಣೀರು ಸುರಿಸುತ್ತಿದ್ದರು ಸೊಸೆಯ ಬದಲಾದ ನಡವಳಿಕೆಯನ್ನು ಕಂಡು ಸಾವಿತ್ರಮ್ನನಿಗೆ ಬಹಳ ದುಃಖವಾಗುತ್ತಿತ್ತು .ಮೊಮ್ಮಗಳು ಶ್ರಾವ್ಯಳಿಲ್ಲದೆ ತಾನು ಬದುಕಿರಲು ಸಾಧ್ಯವೇ ಎಂದು ಆಕೆ ಚಿಂತಿಸು ತ್ತಾಳೆ.ಸೊಸೆಯರು ಯಾಕೆ ತನ್ನ ಅತ್ತೆಯನ್ನೂ ತಾಯಿಯಂತೆ ಕಾಣಬಾರದು.ವೃದ್ಧಾಪ್ಯದಲ್ಲಿ ಕಷ್ಟಪಟ್ಟು ಸಾಕಿದ ಮಕ್ಕಳಿಂದ ದೂರವಾಗಿ ಬದುಕುವುದು ಎಷ್ಟು ಕಷ್ಟ ಎನ್ನುವುದು ವಿದ್ಯಾವಂತಳಾದ ಸೊಸೆಗೆ ತಿಳಿಯಲಾರದೆ ಎಂದು ಆಕೆ ನಿಟ್ಟುಸಿರು ಬಿಡುತ್ತಾಳೆ.ಮೊಮ್ಮಗಳಿಗಿರುವ ಬುದ್ದಿ ಸೊಸೆಗೆ ಇದ್ದರೆ ತಾನು ಆರಾಮ ಇರಬಹುದು .ದೇವರೇ ನನ್ನ ಸೊಸೆಗೆ ಒಳ್ಳೆ ಬುದ್ದಿ ಕೊಡು ಎಂದು ದೇವರನ್ನು ಬೇಡಿಕೊಳ್ಳುತ್ತ ಮೊಮ್ಮಗಳಿಗೆ ಕಥೆಯನ್ನು ಹೇಳುತ್ತಿರುತ್ತಾರೆ .ಅಜ್ಜಿಯ ಮುಖವನ್ನೇ ನೋಡುತ್ತಾ ಮೊಮ್ಮಗಳು ಇದು ಯಾವುದರ ಪರಿವೆಯಿಲ್ಲದೆ ಖುಷಿಯಿಂದ ಕಥೆಕೇಳುತ್ತ ಅಜ್ಜಿಯ ಮಡಿಲಲ್ಲಿ ನಗುತ್ತಿರುತ್ತಾಳೆ
ಪಂಕಜಾ.ಕೆ.ಮುಡಿಪು
Comments
Post a Comment