ಕಿರುಗತೆ*
ಮರಳಿ ಗೂಡಿಗೆ
ತಮ್ಮ ಮನೆಯ ವರಾಂಡದಲ್ಲಿ ಆರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದ ರಾಯರಿಗೆ ಮೊಬೈಲ್ನ ರಿಂಗ್ ಎಚ್ಚರಿಸಿತು.ಆ ಕಡೆಯಿಂದ ಬೀಗರು ಶ್ಯಾಮಣ್ಣನವರ ಆತಂಕದ ಧ್ವನಿ ಕೇಳಿಸಿತು.ಅಂಜಲಿ ರಮೇಶ್ ಇಬ್ಬರೂ ಅಮೆರಿಕಾದಿಂದ ವಾಪಸ್ ಬರ್ತಾ ಇದ್ದಾರೆ.ಅವರಿಗೆ ಅಲ್ಲಿ ಏನೋ ತೊಂದರೆಯಾಗಿದೆ..ತುಂಬಾ ಒತ್ತಡದಲ್ಲಿದ್ದಾರೆ ಅನ್ನಿಸ್ತು
ಇಂದು ಸಂಜೆ ನೀವು ಬನ್ನಿ.ಎಲ್ಲರೂ ಒಟ್ಟಿಗೆ ಕೂತು ಮಾತಾಡೋಣ ಎಂದರು ಶ್ಯಾಮಣ್ಣ..ಅವರ ಮಾತು ಕೇಳುತ್ತಲೇ ರಾಯರಿಗೆ ಸಿಡಿಲು ಬಡಿದಂತಾಯ್ತು..
ಖಾಸಗಿ ಕಂಪನಿಯೊಂದರಲ್ಲಿ ಗುಮಾಸ್ತರಾಗಿ ಬಡತನದಲ್ಲೇ ಬದುಕಿದ ರಾಯರು ಹೆಂಡತಿ ತೀರಿಕೊಂಡ ನಂತರ ಒಬ್ಬಳೇ ಮಗಳು ಅಂಜಲಿಗಾಗಿ ಬಹಳ ಕಷ್ಟದ ಬಾಳುವೆ ನಡೆಸಿದ್ದರು..ತಾಯಿ ಇಲ್ಲದ ಮಗಳೆಂದು ಅಂಜಲಿಯನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದರು..ಅಂಜಲಿಯೂ ಸಹ ಬಡತನವಿದ್ದರೂ ಜಾಣತನದಿಂದ ಅಚ್ಚುಕಟ್ಟಾಗಿ ಮನೆ ಕೆಲಸ, ಅಡುಗೆ,,ಕಾಲೇಜು ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.ತಂದೆಯವರ,ಅತಿಥಿ ಅಭ್ಯಾಗತರ ಕಾಳಜಿ ವಹಿಸುತ್ತ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದಳು.
ಅಂಜಲಿ ಕಾಲೇಜು ಮುಗಿಸುವ ಮೊದಲೇ ವಿದೇಶದಲ್ಲಿ ನೌಕರಿ ಮಾಡುವ ವರ ಸಿಕ್ಕನೆಂದು ರಾಯರು ರಮೇಶ್ ನೊಡನೆ ಮದುವೆ ಮಾಡಿ ಕೊಟ್ಟಿದ್ದರು.ಮಗಳು ಅಳಿಯ ಇಬ್ಬರೂ ಅಮೆರಿಕಾಕ್ಕೆ ಹೋಗಿ ಆರು ತಿಂಗಳಲ್ಲೇ ಮತ್ತೆ ವಾಪಸ್ ಬರುತ್ತಿದ್ದಾರೆ.ಅವರಿಗೆ ದೇಶ ಬಿಟ್ಟು ಬರುವಂತಹ ಏನು ಸಮಸ್ಯೆ ಬಂದಿರಬಹುದೆಂಬ ರಾಯರಿಗೆ ಚಿಂತೆ ಕಾಡ ತೊಡಗಿತು....
ಏನಾದರಾಗಲಿ ಒಮ್ಮೆ ಬೀಗರ ಮನೆ ಕಡೆ ಹೋಗಿ ಬರುವ ವಿಷಯವೇನೆಂದು ಆಗ ತಿಳಿಯುತ್ತದಲ್ಲ ಎಂದು ನಿಶ್ಚಯಿಸಿದ ರಾಯರು ಬೇಗನೆ ಹೊರಟು ಬೀಗರ ಮನೆ ಸೇರುವುದಕ್ಕೂ ಮಗಳು ಅಳಿಯ ಬರುವುದಕ್ಕೂ ಸರಿಯಾಯಿತು.
ತಿಂಡಿ ಊಟ ಎಲ್ಲಾ ಆದಮೇಲೆ ಆರಾಮ ಕುಳಿತಾಗ ಮನೆಯವರೆಲ್ಲರ ಜತೆ ರಮೇಶ ತಾನು ಅಮೆರಿಕಾ ಬಿಟ್ಟು ಬರಲು ಕಾರಣವಾದ ವಿಷಯವನ್ನು ವಿವರಿಸುತ್ತಾ ಇಂಡಿಯಾದಲ್ಲಿಯೇ ಸ್ವಂತ ಕಂಪನಿಯನ್ನು ಇಟ್ಟು ಇಂಡಿಯಾದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಯೋಜನೆ ನನ್ನದು ಅಲ್ಲದೆ ಅಮೆರಿಕಾದಲ್ಲೂ ಇತ್ತೀಚೆಗೆ ವಾತಾವರಣ ಸರಿ ಇಲ್ಲ ವಿದೇಶದವರನ್ನು ಅವರು ನಡೆಸಿಕೊಳ್ಳುವ ರೀತಿ ನನಗೆ ಒತ್ತಡವುಂಟು ಮಾಡಿದೆ.ಅದಕ್ಕಾಗಿ ನಾವಿಬ್ಬರು ಚರ್ಚಿಸಿ ನಿರ್ಧಾರ ಮಾಡಿದ್ದೇವೆ. ನನ್ನ ಗೆಳೆಯನ ಸಹಾಯದಿಂದ ಹೊಸ ಕಂಪನಿಗೆ ಬೇಕಾದ ಎಲ್ಲಾ ವ್ಯವಸ್ಥೆಯಾಗಿದೆ.ಅಮ್ಮ ಅಪ್ಪ ಮಾವ ನೀವು ನಮ್ಮನ್ನು ಹರಸ ಬೇಕು ಮೊದಲಿನಿಂದ ಇದು ನನ್ನ ಕನಸಾಗಿತ್ತು ಎಂದು ರಮೇಶ ಹೇಳಿದಾಗ ಎಲ್ಲರೂ ಅವನ ನಿರ್ಧಾರಕ್ಕೆ ಸಂತಸಗೊಂಡರು ಮಕ್ಕಳು ತಮ್ಮ ಕಣ್ಣೆದುರೇ ಇರುತ್ತಾರೆ ವೃದ್ಧಾಪ್ಯದಲ್ಲಿ ತಮಗೆ ಉರುಗೋಲಾಗುತ್ತಾರೆ ಎನ್ನುವ ಖುಷಿ ಬೀಗರಿಬ್ಬರ ಮುಖದಲ್ಲೂ ಸಂತಸದ ನಗೆಯನ್ನು ತಂದಿತು
ಪಂಕಜಾ.ಕೆ. ರಾಮಭಟ್
Comments
Post a Comment