ಮೌನ ಬಂಗಾರ
ತನ್ನ ಬಾಲ್ಯ ಸ್ನೇಹಿತ ರಮೇಶನ ಮದುವೆಗೆ ಬರಲಾಗದಿದ್ದದ್ದು ಸಂದೇಶನಿಗೆ ತುಂಬಾ ಬೇಸರವಾಗಿತ್ತು. ದೇಹ ಎರಡು ಒಂದೇ ಜೀವ ಎನ್ನುವ ತರ ಬೆಳೆದ ಅವರು ಸ್ನಾತಕೋತ್ತರ ಪದವಿಯವರೆಗೂ ಒಟ್ಟಿಗೆ ಶಾಲೆ ಕಾಲೇಜುಗಳಿಗೆ ಹೋಗಿ ಬರುತ್ತಿದ್ದರು .ಉದ್ಯೋಗದ ನಿಮಿತ್ತ ದೂರವಿದ್ದರೂ ತಿಂಗಳಿಗೆ ಒಮ್ಮೆ ತಪ್ಪಿದರೆ ಎರಡು ತಿಂಗಳಿಗೆ ಒಮ್ಮೆಯಾದರೂ ಭೇಟಿಯಾಗಿ ಸುಖ ದುಃಖ ಹಂಚಿ ಕೊಳ್ಳುತ್ತಿದ್ದರು . ಅಂತ ಸ್ನೇಹಿತ ತನ್ನ ಮದುವೆಗೆ ಖುದ್ದಾಗಿ ಬಂದು ತನ್ನ ಮನದನ್ನೆಯನ್ನು ಪರಿಚಯಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಆಕೆಯ ಫೋಟೋವನ್ನು ಕೂಡಾ ಗೆಳೆಯನಿಗೆ ಕಳಿಸಿಲ್ಲ .
ಗೆಳೆಯನ ಮದುವೆಗೆ ಹೋಗಬೇಕೆಂದಿದ್ದಾಗ ಅತ್ಯವಸರದ ಕೆಲಸದ ಮೇಲೆ ಡೆಲ್ಲಿಗೆ ಹೋಗಬೇಕಾಗಿದ್ದುದರಿಂದ ಗೆಳೆಯನ ಮದುವೆಗೆ ಬರಲು ಸಂದೇಶನಿಗೆ ಆಗಲಿಲ್ಲ . ಒಮ್ಮೆ ಹೋಗಿ ಬರಬೇಕು ಎಂದು ಇದ್ದರೂ ಆ ಕೆಲಸ ಈ ಕೆಲಸ ಎಂದು ಬಿಡುವು ಸಿಗದೆ ಇದ್ದ ಕಾರಣ ಸಂದೇಶನಿಗೆ ಗೆಳೆಯನನ್ನು ಭೆಟ್ಟಿಯಾಗುವುದು ಸಾಧ್ಯವಾಗಲಿಲ್ಲ
ಹಾಗೆಯೇ ತಿಂಗಳುಗಳುರುಳಿ ತಿಂಗಳು ಕಳೆಯಿತು ದಿನಾ ಫೋನ್ ಮಾಡಿ ಜಗಳ ಮಾಡುವ ಸ್ನೇಹಿತ ರಮೇಶನ ಕಾಟ ತಾಳಲಾರದೆ ವಾರದ ರಜೆ ಮೇಲೆ ಸಂದೇಶ ಗೆಳೆಯನನ್ನು ಕಾಣಲು ಹೊರಟಿದ್ದ
. ಮದುವೆಯಾದ ಲಾಗಾಯ್ತು ಗೆಳೆಯನ ಪತ್ರದ ಮುಖಾಂತರ ಅವರಿಬ್ಬರೂ ಎಷ್ಟೊಂದು ಪ್ರೀತಿಸುತ್ತಾರೆ ಎನ್ನುವುದನ್ನು ತಿಳಿದಿದ್ದ ಸಂದೇಶ ಇಷ್ಟು ಅತ್ಯಲ್ಪ ಅವಧಿಯಲ್ಲಿ ಕೋಪಿಷ್ಠ ನಾದ ರಮೇಶನನ್ನು ಸಮಾಧಾನಿಯನ್ನಾಗಿಸಿದ ಅವನ ಹುಡುಗಿಯನ್ನು ನೋಡುವ ಕುತೂಹಲವನ್ನು ಮನಸಿನಲ್ಲಿ ತುಂಬಿ ಅವನ ಮನೆಗೆ ಬಂದು ಇಳಿದಿದ್ದ ತನ್ನ ಹೊಸ ಕಾರಿನಲ್ಲಿ.
ಗೆಳೆಯ ಬರುತ್ತಾನೆ ಎಂದು ವಿಶೇಷ ಅಡಿಗೆ ಮಾಡಿಸಿದ್ದ ರಮೇಶ ಗೆಳೆಯನನ್ನು ಕಂಡು ಭಾವೋದ್ರೇಕದಿಂದ ತಬ್ಬಿಕೊಂಡೆ ಮನೆಯ ಒಳಗೆ ಕರೆತಂದು ಕುಡಿಯಲು ತಾನೇ ಸ್ವತಃ ಗೆಳೆಯನಿಗೆ ಇಷ್ಟವಾದ ಕಿತ್ತಳೆ ಜ್ಯೂಸ್ ತಂದು ಉಪಚರಿಸಿ ಪ್ರಯಾಣದ ಆಯಾಸ ಪರಿಹಾರಕ್ಕಾಗಿ ಸ್ನಾನ ಮಾಡಿ ಬಾ ನಂತರ ಒಟ್ಟಿಗೆ ಕಾಪಿ ಕುಡಿಯೋಣ ಎಂದು ಅವನನ್ನು ರೂಮಿಗೆ ಕರೆದೊಯ್ದು ಬಿಡುವನು.
ರಮೇಶ ಎಷ್ಟೊಂದು ಬದಲಾಗಿದ್ದಾನೆ ಅಬ್ಬಾ ಮದುವೆಯಾಗಿ ಮೂರು ತಿಂಗಳಲ್ಲಿ ಗುರುತು ಸಿಗಲಾರದಷ್ಟು ಬದಲಾದ ಅವನನ್ನು ಕಂಡು ಖುಷಿಯಾದರೂ ಅವನ ಹೆಂಡತಿಯನ್ನು ನೋಡುವ ಕುತೂಹಲ ತಡೆದುಕೊಳ್ಳಲಾಗಲಿಲ್ಲ ಸಂದೇಶನಿಗೆ
ಬೇಗ ಬೇಗ ಸ್ನಾನ ಮಾಡಿ ಬೇರೆ ಬಟ್ಟೆ ತೊಟ್ಟು ಕೆಳಗೆ ಬರಬೇಕೆಂದಿದ್ದಾಗ ರಮೇಶನೇ ಮೇಲೆ ಬಂದು ಗೆಳೆಯನನ್ನು ಊಟದ ಮೇಜಿಗೆ ಕರೆತಂದಿದ್ದ. ಊಟದ ಮೇಜಿನಲ್ಲಿ ಕುಳಿತು ಅದು ಇದು ಹರಟುತ್ತಿರುವಂತೆ ಬಿಸಿ ಬಿಸಿ ಇಡ್ಲಿ ತಂದ ತರುಣಿಯನ್ನು ನೋಡಿ ಒಂದು ಕ್ಷಣ ಅವಾಕ್ಕಾದ ಸಂದೇಶ್ ಮರುಕ್ಷಣವೇ ಸಾವರಿಸಿಕೊಂಡು ಕುಳಿತಾಗ ,ಸುಶಾಂತ್ ಇವಳೇ ಕಣೋ ನನ್ನ ಬೆಟರ್ ಹಾಪ್ ಹಾಗೂ ಈ ಮನೆಯ ಸಾಮ್ರಾಜ್ಞಿ ಎಂದು ಪರಿಚಯಿಸುವನು
ಮಾತಿನ ಮಲ್ಲ ಸಂದೇಶ ಮಾತಿಲ್ಲದೆ ಮೌನವಾಗಿದ್ದು ಕಂಡು ರಮೇಶ ಏನಯ್ಯ ಡೆಲ್ಲಿಗೆ ಹೋಗಿ ಬಂದ ಮೇಲೆ ತುಂಬಾ ಸೈಲೆಂಟ್ ಆಗಿದ್ದಿಯಾ ಏನು ಕಾರಣ ಯಾವುದಾದರೂ ಮಿಕ ಬಲೆಗೆ ಬಿತ್ತೆ ಎಂದು ತಮಾಷೆ ಮಾಡಿದ
ಅವನ ತಮಾಷೆ ಮಾತುಗಳನ್ನು ಸ್ವೀಕರಿಸುವ ಮನಸಿಲ್ಲದ ಸಂದೇಶ ಪ್ರಯಾಣದ ಆಯಾಸದ ನೆಪ ಹೇಳಿ ರೂಮಿನಲ್ಲಿ ಹೋಗಿ ಮಲಗಿ ಯೋಚನೆಯಲ್ಲಿ ಮುಳುಗುವನು. ಗೆಳೆಯನಿಗೆ ಆಯಾಸವಾಗಿದೆಯೆಂದೇ ತಿಳಿದ ರಮೇಶ ಅವನಿಗೆ ತೊಂದರೆ ಕೊಡದೆ ಅಡಿಗೆ ಕೋಣೆಯಲ್ಲಿ ಕೆಲಸದಲ್ಲಿದ್ದ ಪತ್ನಿ ಸಾರಿಕಾಳಿಗೆ ಸಹಾಯ ಮಾಡುತ್ತಾ ಆಗಾಗ ಅವಳನ್ನು ಬಿಗಿದಪ್ಪಿ ತುಂಟಾಟವಾಡುತ್ತಾ ಇರುವಾಗ ನೀರು ಕುಡಿಯಲೆಂದು ಬಂದ ಸಂದೇಶ್ ಅವರನ್ನು ನೋಡಿ ತಕ್ಷಣ ರೂಮಿಗೆ ಹೊರಟು ಹೋಗುವನು
ಅವನ ಮನ ಈಗ್ಗೆ ಆರು ತಿಂಗಳ ಹಿಂದೆ ನಡೆದ ಘಟನೆಯ ಸುತ್ತ ಸುಳಿಯುತ್ತಿತ್ತು ಅದೊಂದು ದಿನ ಯಾರದೋ ಕರೆಯ ಮೇರೆಗೆ ಒಂದು ಮನೆಗೆ ದಾಳಿ ಮಾಡಿದ ಸಂದೇಶ್ ಹಾಗೂ ಅವರ ಸಿಬ್ಬಂದಿಗೆ ಸಿಕ್ಕಿ ಬಿದ್ದ ತರುಣಿಯರಲ್ಲಿ ಒಬ್ಬಳು ತುಂಬಾ ಹೆದರಿದಂತೆ ಕಂಡಿದ್ದರಿಂದ ಅವಳನ್ನು ಮಾಧ್ಯಮದ ಕಣ್ಣಿಗೆ ಬೀಳದಂತೆ ತನ್ನ ಜತೆ ಇರಿಸಿಕೊಂಡು ಅವಳನ್ನು ವಿಚಾರಿಸಿದಾಗ ಆಕೆ ಬಿಕಿ ಬಿಕ್ಕಿ ಅಳುವುದು ಕಂಡು ಅವಳನ್ನು ಸಮಾಧಾನಿಸಿ ""ನೀನು ಯಾರು ಈ ದಂದೆಗೆ ನೀನು ಹೊಸಬಳಂತೆ ಕಾಣುತ್ತಿರುವೆ ನಿನ್ನನ್ನು ನೋಡಿದಾಗ ಉತ್ತಮ ಮನೆತನದ ಹುಡುಗಿಯಂತೆ ಕಾಣುತ್ತಿರುವೆ ಯಾಕೆ ಇಲ್ಲಿಗೆ ಬಂದಿದ್ದು" ಎಂದು ವಿಚಾರಿಸಿದಾಗ ಸ್ವಲ್ಪ ಸಮಾಧಾನಗೊಂಡ ಆಕೆ ತನ್ನ ಕಥೆ ಬಿಚ್ಚಿದ್ದು ಕಂಡು ಸಂದೇಶ್ ಅವಳಿಗೆ ಬುದ್ದಿ ಹೇಳಿ ಅವಳನ್ನು ಅವಳ ಮನೆತನಕ ಬಿಟ್ಟು ಬಂದಿದ್ದ.
ಈಗ ಅವಳೇ ತನ್ನ ಗೆಳೆಯನ ಪತ್ನಿ ಎಂದು ತಿಳಿದಾಗ , ತಾನು ಈ ವಿಷಯವನ್ನು ಗೆಳೆಯನಿಗೆ ಹೇಳಲೋ ಬೇಡವೋ ಎಂದು ಯೋಚಿಸುತ್ತಾ ಕಣ್ಣು ಮುಚ್ಚಿ ಮಲಗಿದ್ದ ಅವನನ್ನು ಏನಯ್ಯ ಇನ್ನು ಆಯಾಸ ಹೋಗಿಲ್ಲವೇ ಊಟ ಮಾಡೋಣ ಬಾ ಎಂದು ಗೆಳೆಯ ರಮೇಶ್ ಕೆಳಗೆ ಕರೆದೊಯ್ದು ತನ್ನ ಪತ್ನಿಗೆ ತನ್ನ ಮತ್ತು ಸಂದೇಶನ ಸ್ನೇಹದ ಬಗ್ಗೆ ವಿವರಿಸುವನು .
ಅವನನ್ನು ಮೊದಲ ಬಾರೀ ನೋಡಿದಾಗಲೇ ಗಾಬರಿಗೊಂಡಿದ್ದ ಸಾರಿಕಾ ಆತನೆಲ್ಲಿ ತನ್ನ ವಿಷಯವನ್ನು ಹೇಳುವನೋ ಎನ್ನುವ ಆತಂಕದಲ್ಲೇ ಅವನಿಗೆ ಕೈಮುಗಿದು ಕಣ್ಣಿನಲ್ಲಿಯೇ ಬೇಡಿಕೆಯನ್ನು ಇಟ್ಟಿದ್ದು ಕಂಡು ಸಂದೇಶನ ಮನದಲ್ಲಿದ್ದ ಮಾತಿನ ಮುತ್ತು ಮೌನದ ಚಿಪ್ಪನ್ನೊಡೆದು ಹೊರಗೆ ಬರಲೇ ಇಲ್ಲ
ಗೆಳೆಯನ ಸುಂದರ ಸಂಸಾರದಲ್ಲಿ ಹುಳಿ ಹಿಂಡುವ ಮನಸಿಲ್ಲದೆ ಸಂದೇಶ್ ಎಂದಿನಂತೆ ತನ್ನ ಗೆಳೆಯನಲ್ಲಿ ಆತ್ಮೀಯವಾಗಿ ಹರಟುತ್ತಾ , ಆತನ ಪತ್ನಿ ಸಾರೀಕಾಳನ್ನು ತಮಾಷೆ ಮಾಡಿ ಕಾಲು ಎಳೆಯುವುದು ಕಂಡು ರಮೇಶ ತೃಪ್ತಿಯಿಂದ ನಕ್ಕು, ನೀನು ಬೇಗನೆ ಮದುವೆಯಾಗಿ ಸಂಸಾರವಂದಿಗನಾಗು ಎಂದು ಬುದ್ದಿ ಹೇಳುವನು ಮೌನದ ಮೊರೆ ಹೊಕ್ಕ ಸಂದೇಶ್ ,ಪಾಪ ಅವಳದೇನು ತಪ್ಪು ಇದರಲ್ಲಿ? ಸದ್ಯ ನನ್ನ ಗೆಳೆಯ ರಮೇಶನಂತಹ ಒಳ್ಳೆಯ ಹುಡುಗ ಅವಳ ಕೈ ಹಿಡಿದಿದ್ದಾನೆ ಸುಖವಾಗಿರಲಿ ಎಂದು ಮನದುಂಬಿ ಹಾರೈಸಿದ .
ಶ್ರೀಮತಿ.ಪಂಕಜಾ.ಕೆ. ರಾಮಭಟ್
Comments
Post a Comment