ಸೀತಾಪಹರಣ
ಭಾಮಿನಿ ಷಟ್ಪದಿ
ಕಾಡಿನಲ್ಲಿಹ ಜಿಂಕೆ ಮರಿಯನು
ನೋಡಿ ಸೀತೆಯು ಹಠವ ಮಾಡುತ
ಬೇಡಿಕೊಂಡಳು ಪತಿಯ ಕರವನು ಹಿಡಿದು ಕೊಳ್ಳುತಲಿ
ಓಡಿ ಹೋಗುವ ಮೃಗವ ಪಡೆಯಲು
ಕಾಡಿನೆಡೆಯಲಿ ನಡೆದು ಬರುತಲಿ
ಹೂಡಿ ಬಾಣವ ಕೊಂದು ಬಿಟ್ಟನು ರಾಮ ಬೆನ್ನಟ್ಟಿ
ತಕ್ಕ ಸಮಯವ ಕಾದು ರಾವಣ
ಪಕ್ಕ ಬಂದನು ವೇಷ ಬದಲಿಸಿ
ರೊಕ್ಕಬೇಡವದೆಂದು ಹೇಳುತ. ಸೆಳೆದ ಸೀತೆಯನು
ಠಕ್ಕ ಸನ್ಯಾಸಿಯನು ಕಾಣುತ
ರೆಕ್ಕೆ ಮುರಿದಿಹ ಹಕ್ಕಿಯಂತೇ
ಬಿಕ್ಕಿ ಕೂಗುತ ರಾಮ ಲಕ್ಷ್ಮಣರನ್ನು ಕರೆಯುವಳು
ಹರಿಯ ನೆನೆದು ಜಟಾಯು ಹೊರಟನು
ಮರೆತು ತನ್ನಯ ಜೀವದಾಸೆಯ
ಭರದಿ ಕಾದಿದ ದುರುಳ ರಾವಣನನ್ನು ತಡೆಯುತಲಿ
ತರಿದು ಬಿಟ್ಟನು ಬೀಸಿ ಕತ್ತಿಯ
ಮುರಿದು ರೆಕ್ಕೆಯ ತೂರಿ ಭರದಲಿ
ಧರೆಗೆ ಬಿದ್ದಿತು ಹಕ್ಕಿಯಾಗಲೆ ಸೋತು ಸೊರಗುತಲಿ
ಮರಳಿ ಬಂದಿಹ ರಾಮ ಲಕ್ಷ್ಮಣ
ತೆರೆದ ಬಾಗಿಲಲಿಣುಕಿ ನೋಡಲು
ಬರಿಯ ಗುಡಿಸಲ ಕಂಡು ಬೇಸರ ಪಟ್ಟು ನಿಂತಿಹರು
ಮರೆಯಲಿರುತಿಹ ಬಿಲ್ಲು ಬಾಣವ
ಕರದಿ ಹಿಡಿಯುತ ಕಾಡಿನೆಲ್ಲೆಡೆ
ತಿರುಗಿ ರಾಮನು ಹುಡುಕಿ ಸೀತೆಯ ನಡೆದು ಬಳಲಿದನು
ಹರಿವ ನೀರನು ಕರದಲೊರೆಸುತ
ಕರವ ಮುಗಿಯುತ ಗರುಡನಳಿಯನು
ಕರೆದು ತಿಳಿಸಿದ ದುರುಳ ಮಾಡಿದ ಮೋಸ ಬೇಗದಲಿ
ನೆರೆದ ವಾನರ ವೀರರೆಲ್ಲರ
ಕರೆಸಿ ಕೊಂಡನು ತನ್ನ ಕಾರ್ಯಕೆ
ಸರಿಸಿ ಬರುತಿಹ ತಡೆಯನೆಲ್ಲವ ಗೆದ್ದು ವೇಗದಲಿ
ಭಾಮಿನಿಯು ತಾ ಕಷ್ಟ ಪಡುತಲಿ
ರಾಮ ನಾಮವ ಭಜಿಸುತಿರುತಲಿ
ಸಾಮಗಾನವ ಹಾಡಿ ತನ್ನಯ ಬವಣೆ ಮರೆಯುವಳು
ಕಾಮಿತಾರ್ಥವ ಕೊಡುವ ದೇವನು
ಭಾಮೆಯನು ಕದ್ದೊಯ್ದ ಕೇಡಿಯ
ಭೂಮಿ ಭಾರವನಿಳಿಸಿ ಕೊಳ್ಳಲು ಕೊಂದ ಕೋಪದಲಿ
ಶ್ರೀಮತಿ.ಪಂಕಜಾ.ಕೆ. ರಾಮಭಟ್.
Comments
Post a Comment