ಪಾವನಿ
ಕಡಲ ತಡಿಯಲ್ಲಿ ಕಲ್ಲು ಬೆಂಚಿನಲ್ಲಿ ಕುಳಿತು ಹಾರಿ ಬರುತ್ತಿರುವ ಅಲೆಗಳನ್ನೇ ನೋಡುತ್ತಾ ಇದ್ದ ಪಾವನಿಯ ಮನಸ್ಸು ಹುಚ್ಚೆದ್ದ ಕುದುರೆಯಂತೆ ಅಶಾಂತಿಯಿಂದ ಕೂಡಿತ್ತು.
ಬೇಡ ಬೇಡವೆಂದರೂ ಕಳೆದುಹೋದ ಜೀವನದ ಪುಟನೆಗಳ ನೆನಪುಗಳು ಒಂದರ ಹಿಂದೊಂದು ಬಂದು ಘಾಸಿ ಗೊಳಿಸಿದಾಗ ,ಪಾವನಿ ಕಣ್ಣು ಮುಚ್ಚಿ ನೆನಪಿನಾಳದಲ್ಲಿ ಮುಳುಗಿ ಹೋದಳು .
ಹಿ ಪಾವ್ ಪ್ಲೀಸ್ ಕಣೆ ನನಗೆ ಸ್ನೇಹಿತರ ಜತೆ ಪಿಕ್ನಿಕ್ ಹೋಗಲೇ ಬೇಕು ಅಪ್ಪ ಅಮ್ಮನನ್ನು ಒಪ್ಪಿಸು ಎಂದು ಪ್ರತಿಯೊಂದಕ್ಕೂ ತನಗೆ ದುಂಬಾಲು ಬೀಳುವ ತಮ್ಮ ಪ್ರವೀಣನೆಂದರೆ ಪಾವನಿಗೂ ಅಚ್ಚುಮೆಚ್ಚು .ತನ್ನ ನಂತರ 5 ವರ್ಷಗಳ ನಂತರ ಹುಟ್ಟಿದ ತವರಿನ ಏಕೈಕ ಕುಡಿ ಎಲ್ಲರ ಕಣ್ಮಣಿಯಾಗಿದ್ದರೂ ಅವನು ಹೆಚ್ಚು ಅಂಟಿಕೊಂಡಿದ್ದು ತನ್ನನ್ನೇ. ಪ್ರತಿಯೊಂದಕ್ಕೂ ಅಕ್ಕ ಅಕ್ಕಾ ಎಂದು ತನ್ನ ಹಿಂದೆ ಮುಂದೆ ತಿರುಗುವ ತಮ್ಮನೆಂದರೆ ತನಗೂ ಇಷ್ಟ ಅವನ ಬೇಕು ಬೇಡಗಳನ್ನೆಲ್ಲಾ ನೋಡಿಕೊಳ್ಳುವುದೆಂದರೆ ತನಗೆ ಇಷ್ಟ . ತನ್ನ ಶಾಲೆಯ ಕೆಲಸಗಳ ಜತೆ ತಮ್ಮನನ್ನು ನೋಡಿಕೊಳ್ಳುತ್ತಾ ಅವನ ವಿದ್ಯಾಭ್ಯಾಸದಲ್ಲೂ ಸಹಾಯ ಮಾಡುತ್ತಿದ್ದ ಪಾವನಿಯನ್ನು ಕಂಡು ತಂದೆ ತಾಯಿ ಹೆಮ್ಮೆ ಪಟ್ಟುಕೊಳ್ಳುತ್ತಿದ್ದರು .
ಒಮ್ಮೆ ಯಾವುದೋ ನೆಂಟರ ಮನೆಯ ಕಾರ್ಯಕ್ರಮಕ್ಕೆಂದು ತಂದೆ ತಾಯಿಯ ಜತೆ ಹೋದ ಪ್ರವೀಣ ಬರುವಾಗ ಬಸ್ ಅಪಘಾತವಾಗಿ ತಂದೆ ತಾಯಿಯರನ್ನು ಕಳೆದುಕೊಂಡು ಪವಾಡ ಸದೃಶವಾಗಿ ಉಳಿದು ಕೊಂಡಾಗ ತಾನಿನ್ನು ಪಿ. ಯು.ಸಿ ಮುಗಿಸಿದ್ದೇನಷ್ಟೇ ತನಗೆ ಸಿ ಇ ಟಿ ಬರೆಯಲು ಇದ್ದುದರಿಂದ ಅವರ ಜತೆ ತಾನು ಹೋಗಿರಲಿಲ್ಲ . ಡಾಕ್ಟರ್ ಆಗಿ ಸೇವೆ ಸಲ್ಲಿಸಬೇಕು ಎನ್ನುವ ಮಹತ್ವಾಕಾಕ್ಷೆ ಇದ್ದ ತನಗೆ ಇದು ಒಂದು ದೊಡ್ಡ ಆಘಾತವಾಗಿತ್ತು .ಅಂದಿನಿಂದ ತಮ್ಮನ ವಿದ್ಯಾಭ್ಯಾಸಕ್ಕಾಗಿ ತಾನು ತನ್ನ ಆಸೆಯನ್ನು ಬದಿಗಿಟ್ಟು ತಂದೆಯ ಸ್ನೇಹಿತರ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ತಮ್ಮನನ್ನು ಓದಿಸಿ ಅವನನ್ನು ಒಂದು ನೆಲೆಗೆ ಹಚ್ಚುವುದರರಲ್ಲಿ ತನ್ನ ಯೌವ್ವನದ ದಿನಗಳು ವ್ಯರ್ಥವಾಗುತ್ತಿರುವುದು ತಿಳಿದರೂ ಈ ಬಗ್ಗೆ ಗಮನ ಹರಿಸದೆ ತಮ್ಮನನ್ನು ಒಂದು ನೆಲೆಗೆ ಸೇರಿಸಿದಾಗ ಧನ್ಯತೆಯಿಂದ ತಾನು ಎಷ್ಟು ಖುಷಿ ಪಟ್ಟಿದ್ದೆ .ಆದರೆ ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ತಮ್ಮ ತನಗೆ ಒಂದು ಮಾತೂ ತಿಳಿಸದೆ ತನ್ನ ಕಂಪೆನಿಯ ಓನರ್ ಮಗಳನ್ನೇ ಮದುವೆಯಾಗಿ ಅವರ ಮನೆ ಅಳಿಯನಾಗಿ ಹೋಗಿ ತನ್ನನ್ನು ಮರೆತೇ ಬಿಟ್ಟಿದ್ದು ,ಒಮ್ಮೆಯೂ ತನ್ನನ್ನು ನೋಡಲು ಬಾರದ ತಮ್ಮನನ್ನು ತಾನಾಗಿ ಒಮ್ಮೆ ನೋಡಲು ಹೋದಾಗ ,ತಮ್ಮನ ಹೆಂಡತಿ ಮಾಡಿದ ಅವಮಾನ, ಅದನ್ನು ಕಂಡರೂ ಕಾಣದಂತೆ ಮೌನವಾಗಿದ್ದ ತಮ್ಮ ಪ್ರವೀಣ, ದುಃಖ ಉಕ್ಕಿ ಬಂದು ಇಷ್ಟೇನೆ ಇಷ್ಟಕ್ಕಾಗಿ ತಾನು ತನ್ನ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಹಗಲಿರುಳೂ ದುಡಿದದ್ದೇ ಎಂದು ಕಣ್ಣು ತುಂಬಿ ಬಂದು ದುಃಖ ತಡೆಯಲಾರದೆ ಕಡಲತಡಿಯಲ್ಲಿ ಕುಳಿತು ಮನಸಾರೆ ಅತ್ತು ಬಿಟ್ಟಿದ್ದೆ.
ಬದುಕು ಕೊನೆಗಾಣಿಸಬೇಕೆಂದಿದ್ದಾಗ ಇದೇ ಕಡಲ ತಡಿಯಲ್ಲಿ ಅಲ್ಲವೇ ಅವರ ಪರಿಚಯವಾದುದು ಅವರೂ ತನ್ನಂತೆ ನೊಂದವರೆಂದು ತಿಳಿದಾಗ ತನ್ನ ಮನ ಅವರಿಗಾಗಿ ಮಿಡಿದಿತ್ತಲ್ಲವೇ? ಅಂದು ಕಡಲ ತಡಿಯಲ್ಲಿ ಪರಿಚಯವಾದ ಸಾಕೇತ ತನ್ನನ್ನು ಸಮಾಧಾನಿಸಿ ಸಾಯುವುದು ದೊಡ್ಡದಲ್ಲ ಬದುಕಿ ಸಾಧಿಸಿ ತೋರಿಸಬೇಕು ನಿನಗೆ ಕೆಲಸವಿದೆ ನಿನ್ನ ಅನ್ನ ನೀನು ಸಂಪಾದಿಸುತ್ತಿದ್ದಿಯಾ ನಿನ್ನ ಚಿಕ್ಕಂದಿನ ಆಸೆಯ ಗುರಿಯನ್ನು ತಲುಪಲು ಇದು ಸಕಾಲ ಎಂದು ದೈರ್ಯ ತುಂಬಿ ತನ್ನನ್ನು ಮದುವೆಯಾಗಿ ಸ್ನೇಹಿತನಂತೆ ಜತೆಯಲ್ಲಿದ್ದು ತನ್ನ ಬೇಕು ಬೇಡಗಳನ್ನು ನೋಡುತ್ತಾ ತಾನು ಒಬ್ಬ ವೈದ್ಯೆ ಯಾಗಿ ತನ್ನ ಕನಸನ್ನು ನನಸು ಮಾಡಲು ಸ್ಫೂರ್ತಿ ತುಂಬಿದ ದೇವರು
ಆ ದಿನ ಸಾಕೇತ್ ಸಿಗದೇ ಇರುತ್ತಿದ್ದರೆ , ತಾನೇನಾಗುತ್ತಿದ್ದೇನೋ ಅವರ ಸಹಕಾರದಿಂದ ಇಂದು ತಾನು ಒಬ್ಬ ಬಹುಜನಪ್ರಿಯ ವೈದ್ಯೆ ಯಾಗಿದ್ದು ತನ್ನದೇ ಆದ ನರ್ಸಿಂಗ್ ಹೋಮ್ ಒಂದರ ಒಡತಿಯಾಗಿದ್ದೇನೆ. ತಾವಿಬ್ಬರು ಮದುವೆಯಾಗಲು ನಿಶೈಯಿಸಿ ತನ್ನ ತಮ್ಮನನ್ನು ಕಾಣಲು ಹೋಗಿದ್ದಾಗ ತಮ್ಮನ ಹೆಂಡತಿ ಆಡಿದ ಮಾತು ಈಗಲೂ ಕಿವಿಯಲ್ಲಿ ಗುಯ್ಗುಡುತ್ತಿದೆ
.ಇಷ್ಟು ದಿನ ಅಕ್ಕ ಬದುಕಿದ್ದಾಳೋ ಸತ್ತಿದ್ದಾಳೋ ಎಂದು ನೋಡದ ತಮ್ಮ ಇಂದು ಹೆಂಡತಿ ಜತೆ ಬಂದು ತನ್ನ ಕಾಲು ಹಿಡಿದು ಬೇಡಿಕೊಂಡಾಗ ತಾನೇನು ಮಾಡಬೇಕಾಗಿತ್ತು. ಪ್ಲೀಸ್ ಅಕ್ಕ ಇದೊಂದು ಬಾರಿ ಕ್ಷಮಿಸಿ ಬಿಡು ದಯವಿಟ್ಟು ನನ್ನ ಮಗನನ್ನು ಉಳಿಸಿಕೊಡು ಎಂದು ಬೇಡಿಕೊಂಡಾಗ ಮನಸ್ಸು ಕುದಿದರೂ ರಕ್ತ ಸಂಬಂಧದ ಮುಂದೆ ಮಿಕ್ಕಿದ್ದೆಲ್ಲವೂ ಗೌಣವಾಯ್ತು ಎನ್ನುವಂತೆ ತಾನು ಅವನ ಕೈಯನ್ನು ಅದುಮಿ ಸರ ಸರನೆಂದು ವಾರ್ಡಿಗೆ ಹೊರಟು ಹೋಗಿದ್ದೆ.
ಅಲ್ಲಿ ಹಾಸಿಗೆಯಲ್ಲಿ ಶವದಂತೆ ಮಲಗಿದ್ದ ತನ್ನ ತವರಿನ ಕುಡಿಯನ್ನು ಕಂಡಾಗ ಕಣ್ಣು ತುಂಬಿ ಬಂದಿತ್ತು.ಈ ಮುದ್ದು ಮಗು ತನ್ನ ತಮ್ಮನ ಪಡಿಯಚ್ಚು ತನ್ನ ತವರಿನ ದೀಪ ಎನ್ನುವ ಯೋಚನೆ ಬಂದುದೆ ತಡ ಕೂಡಲೇ ಕಾರ್ಯೋನ್ಮುಖಳಾಗಿ .ಮಗುವನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದೆ .ತಮ್ಮ ಮತ್ತು ತಮ್ಮ ನ ಹೆಂಡತಿ ಕೃತಜ್ಞತೆಯಿಂದ ಕಣ್ಣಲ್ಲಿ ನೀರು ತುಂಬಿಕೊಂಡಾಗ ಸಾರ್ಥಕದ ಭಾವ ತುಂಬಿ ಬಂದು ತನ್ನ ಕಣ್ಣಲ್ಲೂ ನೀರಾಡಿತ್ತು ಅದನ್ನು ತೋರಗೊಡಬಾರದೆಂದು ಅವಸರದಲ್ಲಿ ತನ್ನ ಸುಖ ದುಃಖಗಳಿಗೆ ಹೆಗಲಾಗುತ್ತಿದ್ದ ಕಡಲ ತಡಿಗೆ ಓಡೋಡಿ ಬಂದಿದ್ದೆ .ಎಂದು ಯೋಚಿಸುತ್ತಿರುವಾಗ ಪಾವನಿಯನ್ನು ಹುಡುಕಿಕೊಂಡು ಬಂದ ಸಾಕೇತ್ ಅಲ್ಲಿ ಪಾವನಿಯನ್ನು ಕಂಡು ತಾನು ಮೊದಲ ಬಾರಿ ಅವಳನ್ನು ಕಂಡ ನೆನಪು ಉಕ್ಕಿ ಬಂದು ಧಾವಿಸಿ ಹೋಗಿ ಪಾವನಿಯ ಭುಜ ತಟ್ಟಿ ಏಳು ಪಾವನಿ ಮನೆಗೆ ಹೋಗೋಣ ನೀನು ಮಾಡಿದ್ದು ಸರಿ ಇದೆ.ಎಷ್ಟಾದರೂ ಅವನು ನಿನ್ನ ತಮ್ಮ , ರಕ್ತ ಸಂಬಂದದ ಮುಂದೆ ಯಾವದೂ ಇಲ್ಲ .ಒಂದು ಜೀವ ಉಳಿಸುವ ಪುಣ್ಯ ಕಾರ್ಯ ನೀನು ಮಾಡಿದ್ದಿಯಾ ಅದು ನಿನ್ನ ತಮ್ಮನ ಮಗನಲ್ಲದೆ ಇದ್ದರೂ ನಿನ್ನ ಕರ್ತವ್ಯವೇ ಆಗಿತ್ತು ಅಲ್ಲವೇ ಎಂದು ಸಮಾಧಾನಿಸಿ ತನ್ನ ಭುಜಕ್ಕೆ ಒರಗಿಸಿ ಅವಳನ್ನು ತನ್ನೆರಡು ಕೈಗಳಿಂದ ಬಿಗಿಯಾಗಿ ಹಿಡಿದು ಮುದ್ದಿಸಿ ಅವಳ ದುಗುಡ ನಿವಾರಿಸಿ ಕಾರಿನೆಡೆಗೆ ಕರೆದೊಯ್ದ
ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
Comments
Post a Comment