ಪಶ್ಚಾತ್ತಾಪ
ಸಣ್ಣಗೆ ಸುರಿಯುತ್ತಿದ್ದ ಮಳೆ ಜೋರಾಗಿ ರಪ ರಪನೆಂದು ಹನಿಗಳು ಉದುರಲು ಪ್ರಾರಂಭಿಸಿತು.
ಪಾರ್ಕಿನ ಕೆಂಪು ಬಣ್ಣದ ಕಲ್ಲು ಬೆಂಚಿನ ಮೇಲೆ ಅಮ್ಮನ ಕೊಡೆಯನ್ನು ಬಿಡಿಸಿ ಕುಳಿತಿದ್ದ ಚರಣ್ ನ ಮನಸು ಮಾತ್ರ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ವಿಹ್ವಲಗೊಂಡಿತ್ತು .
ಅವನ ಮನಸ್ಸಾಗಲೇ ತನ್ನ ಬಾಲ್ಯದ ದಿನಗಳತ್ತ ಸರಿದಿತ್ತು.ಬಾಲ್ಯದಲ್ಲಿ ಇದೇ ರೀತಿ ಮಳೆ ಬಂದಾಗಲೆಲ್ಲಾ ತಾನು ಅಂಗಳಕ್ಕೆ ಓಡಿ ಮಳೆಯಲ್ಲಿ ಕುಣಿಯುತ್ತಿದ್ದುದು, ಅಮ್ಮ ಬೈದು ತನ್ನನ್ನು ಎಳೆದುಕೊಂಡು ಬಂದು ತನ್ನ ಸೆರಗಿನಿಂದಲೇ ತಲೆ ಒರೆಸುತ್ತಿದ್ದುದು, ಶೀತ ಜ್ವರಬಂದಾಗ ರಾತ್ರಿ ಹಗಲು ನಿದ್ದೆಗೆಟ್ಟು ತನ್ನನ್ನು ಉಪಚರಿಸುತ್ತಿದ್ದುದು.ಎಲ್ಲವೂ ಸಿನೆಮಾದ ರೀಲಿನಂತೆ ಒಂದರ ಹಿಂದೊಂದು ಬಂದು ಮುತ್ತಿ ಅವನನ್ನು ಅಧೀರನನ್ನಾಗಿಸಿತು.
ಛೇ ಅಂತ ಅಮ್ಮನಿಗೆ ತಾನೇನು ಕೊಟ್ಟೆನಿನ್ನೆ ಮೊನ್ನೆ ಬಂದ ಹೆಂಡತಿಯ ಮಾತು ಕೇಳಿ ಅವಳನ್ನು ವೃದ್ಧಾಶ್ರಮಕ್ಕೆ ತಳ್ಳಿ ಬಿಟ್ಟೆನಲ್ಲಾ.
ತಂದೆ ಇಲ್ಲದ ತನ್ನನ್ನು ಎಷ್ಟೊಂದು ಪ್ರೀತಿಯಿಂದ ಸಾಕಿದ್ದಳು ಎಳೆ ಹರೆಯದಲ್ಲೇ ಪತಿಯನ್ನು ಕಳೆದುಕೊಂಡಿದ್ದರೂ ಧೃತಿಗೆಡದೆ, ಕಷ್ಟಪಟ್ಟು ಕೆಲಸಮಾಡಿ ಓದಿಸಿ ತನ್ನನ್ನು ಒಂದು ನೆಲೆಗೆ ತಂದವಳಿಗೆ ತಾನು ಕೊಟ್ಟ ಉಡುಗೊರೆ ಇದುವೇ
ಛೀ ಥು ತನ್ನಂತ ಮಗ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಪಶ್ಚಾತ್ತಾಪದಿಂದ ತನ್ನನ್ನೆ ತಾನು ಹಳಿದು ಕೊಳ್ಳುತ್ತಾ ಕುಳಿತಿದ್ದ ಚರಣ್ ಕೊನೆಗೊಂದು ದೃಢ ನಿಶ್ಚಯ ಮಾಡಿ ತನ್ನಮ್ಮನನ್ನು ಇಂದೇ ವೃದ್ಧಾಶ್ರಮದಿಂದ ಕರೆತರುತ್ತೇನೆ ಎಂದು ನಿಶೈಯಿಸಿದಾಗ ಕುದಿಯುತ್ತಿದ್ದ ಮನಸು ತಹಬಂದಿಗೆ ಬಂದಂತೆನಿಸಿತು
ಕೂಡಲೇ ಚರಣ್ ಅಲ್ಲಿಂದ ಹೊರಟು ವೃದ್ದಾಶ್ರಮದ ಕಡೆಗೆ ತನ್ನ ಕಾರು ಓಡಿಸಿದನು .
ವೃದ್ಧಾಶ್ರಮದ ಬಾಗಿಲಲ್ಲಿ ಮಗ ಬರುತ್ತಾನೆ ತನ್ನನ್ನು ಕರೆದೊಯ್ಯುತ್ತಾನೆ ಎನ್ನುವ ನಿರೀಕ್ಷೆಯಿಂದ ಸಾಯಂಕಾಲವಾದ ತಕ್ಷಣ ಹೊರಗೆ ಬಂದುಕುಳಿತುಕೊಳ್ಳುವ ಆಕೆ ರಾತ್ರಿಯಾದಂತೆಲ್ಲ ನಿರಾಸೆಯಿಂದ ಒಳಗೆ ಹೋಗುತ್ತಿದ್ದಳು.
ಇಂದೂ ಅದೇ ರೀತಿ ಕುಳಿತಿದ್ದ ಆಕೆ ಇನ್ನು ಕಾಯುವುದು ಅಸಾದ್ಯವೆನಿಸಿ ಸುರಿಯುವ ಮಳೆಯಲ್ಲೇ ಗೇಟು ಸರಿಸಿ ಹೊರಗೆ ಹೋಗಿ ಬಿಟ್ಟಳು
ವೃದ್ದಾಶ್ರಮಕ್ಕೆ ಬಂದ ಚರಣ್ ನಿಗೆ ಅಮ್ಮ ಎಲ್ಲಿಯೂ ಕಾಣದಾಗಲು ಸಿಬ್ಬಂದಿಯವರಲ್ಲಿ ವಿಚಾರಿಸಿದಾಗ ಅವರು ಗಾಬರಿಗೊಂಡು ನಿಮ್ಮ ನಿರೀಕ್ಷೆಯಲ್ಲೇ ದಿನಾ ಇಲ್ಲಿ ಕುಳಿತಿರುತ್ತಿದ್ದ ಆಕೆ ಇಂದೂ ಅದೇ ರೀತಿ ಕುಳಿತಿದ್ದಾಗಿಯೂ ಮಳೆ ಬರುತ್ತಿದ್ದರೂ ಒಳಗೆ ಬಾರದೆ ಅಲ್ಲಿಯೇ ಇದ್ದುದಾಗಿಯೂ ನಾವೆಲ್ಲಾ ಒಳಗೆ ಇದ್ದಾಗ ಆಕೆ ಎಲ್ಲೋ ಇಲ್ಲೇ ಹೊರಟು ಹೋಗಿರಬಹುದು .ಮಳೆ ಬಿಡಲಿ ಹುಡುಕೋಣ ಎಂದು ಹೇಳುತ್ತಾರೆ.
ಆದರೆ ಅವರು ಮಾತು ಮುಗಿಸುವ ಮೊದಲೇ ಚರಣ್ ಮಳೆಯನ್ನೂ ಲೆಕ್ಕಿಸದೆ ಕಾರನ್ನು ಅಲ್ಲಿಯೇ ಬಿಟ್ಟು ಓಡು ನಡಿಗೆಯಿಂದ ರಸ್ತೆಗಿಳಿದು ಕಂಡ ಕಂಡವರನ್ನೆಲ್ಲಾ ಅಮ್ಮನ ಬಗ್ಗೆ ವಿಚಾರಿಸುತ್ತಾ ಅಲೆಡಾಡಿದ.
ಕೊನೆಗೂ ಅವನ ಅಮ್ಮ ಸಿಕ್ಕಾಗ ಆನಂದ ತಡೆಯಲಾರದೆ ಬಾವೋದ್ವೇಗದಿಂದ ಆಕೆಯನ್ನು ಬಿಗಿದಪ್ಪಿ ಅಮ್ಮಾ ನನ್ನನ್ನು ಕ್ಷಮಿಸು ಮನೆಗೆ ಹೋಗೋಣ ಬಾ ಎಂದು ಹೇಳಿ ಆಕೆಯ ಪಾದಕ್ಕೆ ತಲೆಯಿಟ್ಟು ದುಃಖಿಸುತ್ತಾನೆ.
ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಿದ್ದ ಆಕೆ ಅವನನ್ನು ಹಿಡಿದೆತ್ತಿ ಮಗ ಎಂದು ತಬ್ಬಿ ಕೊಳ್ಳುತ್ತಾಳೆ . ಮರುಕ್ಷಣವೇ ಮಗನನ್ನು ಬಳಸಿದ್ದ ಆಕೆಯ ಕೈಗಳು ಸಡಿಲವಾಗಿ ಕೃಶಕಾಯ ಧಾರಾಶಾಯಿಯಾದಾಗ ಎಚ್ಚೆತ್ತ ಚರಣ್ ಅವಳನ್ನು ಎತ್ತಿಕೊಂಡು ಓಡುತ್ತಾ ಬಂದು ಕೂಡಲೇ ಕಾರೇರಿ ಆಸ್ಪತ್ರೆಗೆ ದೌಡಾಯಿಸುತ್ತಾನೆ.
ಆದರೆ ಮಗನನ್ನು ನೋಡಿದ ಸಂತಸದಲಿ ಅದಾಗಲೇ ಆ ಮುದಿ ಜೀವದ ಪ್ರಾಣಪಕ್ಷಿ ಅನಂತದಲ್ಲಿ ಲೀನವಾಗಿತ್ತು.
ಶ್ರೀಮತಿ.ಪಂಕಜಾ.ಕೆ.
Comments
Post a Comment