Skip to main content

ಮತ್ತೆ ಮೂಡಿತು ಒಲವು

ಮತ್ತೆ ಮೂಡಿತು ಒಲವು


ಗೆಳೆಯರ ಒತ್ತಾಯಕ್ಕೆ  ಪುತ್ತೂರು ಮಹಾಲಿಂಗೇಶ್ವರ ದೇವರ  ಜಾತ್ರೆಗೆ ಹೋಗಿದ್ದ ಶಶಾಂಕನ ಮನಸ್ಸು ಏಕೋ ಅಸ್ತವ್ಯಸ್ತವಾಗಿತ್ತು.ತಾನು ಏನನ್ನೋ ಕಳೆದು ಕೊಂಡ ಭಾವನೆ . ಮನಸ್ಸಿನ ಮೂಲೆಯಲ್ಲಿ ಎಂತದೋ ಒಂದು ಹೇಳಲಾರದ ಭಾವನೆಯು ಒತ್ತರಿಸಿ ಬಂದು ಮೌನವಾಗಿ ಗೆಳೆಯರ ಜತೆ ಹೆಜ್ಜೆ ಹಾಕುತ್ತಿದ್ದ, ಶಶಾಂಕನನ್ನು ಆ ಧ್ವನಿ ಹಿಡಿದು ನಿಲ್ಲಿಸಿತು. ಆ ಧ್ವನಿ ತೀರಾ ಪರಿಚಿತವೆನಿಸಿತು ಆತನಿಗೆ ಜನಜಂಗುಳಿಯನ್ನು ಸರಿಸಿ ಧ್ವನಿಯ ಒಡತಿಯನ್ನು ಪತ್ತೆ ಹಚ್ಚಲೆಂದು ಧಾವಿಸಿ ಬಂದ ಶಶಾಂಕನಿಗೆ ನಿರಾಸೆಯಾಯಿತು.

                  ಆಕೆಯಾಗಲೇ  ಅಲ್ಲಿಂದ ಸರಿದು ಹೋಗಿದ್ದಳು. ಇದೇನು ತನ್ನ ಭ್ರಮೆಯೊ ಅಲ್ಲ ಆಕೆ ನಿಜವಾಗಿಯೂ ಜಾತ್ರೆಗೆ ಬಂದಿದ್ದಾಳಾ ಎನ್ನುವುದು ತಿಳಿಯದೆ  ಗೊಂದಲಕ್ಕೆ ಒಳಗಾದ ಶಶಾಂಕ ದೇವರೇ ಇಂದಾದರು ನನ್ನ ಮನ.ಮೆಚ್ಚಿದ ಹುಡುಗಿ ನನಗೆ ಸಿಗುವಂತೆ ಮಾಡು ಎಂದು ಮನಸಾರೆ ಬೇಡಿಕೊಂಡ  ಅಲ್ಲಿಂದ ಮುಂದೆ ಜಾತ್ರೆಯಲ್ಲಿ ತಿರುಗುತ್ತಿದ್ದರೂ ಅವನ ಕಣ್ಣುಗಳು ಆ ಧ್ವನಿಯ ಒಡತಿಯನ್ನು ಅರಸುತ್ತಿತ್ತು .ಕಿವಿ ಆ ಧ್ವನಿಗಾಗಿ ಕಾತರಿಸುತ್ತಿತ್ತು .

                    ಜಾತ್ರೆಯ ಬಯಲಿನಲ್ಲಿದ್ದರೂ ಶಶಾಂಕನ ಮನ ಹಿಂದಕ್ಕೆ ಓಡಿತು .ಮನಸ್ವಿನಿ ಮತ್ತು ತಾನು ಪ್ರೀತಿಯಿಂದ ಇದ್ದ ಕ್ಷಣಗಳು, ಚಿಕ್ಕ ಪುಟ್ಟ ಕೆಲಸಕ್ಕೂ ತನ್ನನ್ನೇ ಅವಲಂಬಿಸುವ ಆ ಮುಗ್ಧ ಮನದ ಹುಡುಗಿ ,ಆತನ ಕನಸಿನ ಕನ್ಯೆಯಾಗಿದ್ದಳು ಚಿಕ್ಕಂದಿನಿಂದಲೇ ಹೆತ್ತವರು  ಮನಸ್ವಿನಿಯನ್ನು  ಶಶಾಂಕನ ಹೆಂಡತಿಯೆಂದು ಮಾತನಾಡುತ್ತಿದ್ದುದರಿಂದ ಅವನಿಗೂ ಅದೇ ಭಾವನೆ ಮನಸ್ಸಿನಲ್ಲಿತ್ತು .ಬೆಳೆಯುತ್ತಾ ಅದು ಇನ್ನಷ್ಟು ಗಟ್ಟಿಯಾದಾಗ, ಆತ ಅವಳ ಜಡೆ ಎಳೆದು ಆಗಾಗ ಕಾಡುವುದಿತ್ತು ಏನೇ ನನ್ನ ಮುದ್ದು ಹೆಂಡತಿ ಯಾವಾಗ ನಿನ್ನ ಮದುವೆ ಎಂದು ಕೆಣಕುತ್ತಿದ್ದ .ಅವಳಾದರೊ ಅಷ್ಟೇ ತುಂಟ ತನದಿಂದ ಉತ್ತರಿಸಿ ತನ್ನ ಕೈಗೆ ಸಿಕ್ಕದೆ ಓಡಿ ಹೋಗುತ್ತಿದ್ದಳು. ಅಗೆಲ್ಲ ಎಲ್ಲಿಗೆ ಹೋಗುತ್ತಿಯಾ ಒಂದಿನ ನನ್ನ ಕೈಗೆ ಸಿಗದೆ ಇರುತ್ತಿಯಾ ಎಷ್ಟಾದರೂ ನೀನು ನನ್ನ ಹೆಂಡತಿ ತಾನೇ ಎಂದು ಕೂಗಿ ಹೇಳುತ್ತಿದ್ದ .ಆದರೆ ಈ ರಸ ನಿಮಿಷ ಗಳೆಲ್ಲಾ ಯಾವುದೋ ಚಿಕ್ಕ ಕಾರಣಕ್ಕೆ  ತನ್ನ ತಂದೆ ಹಾಗೂ ಮನಸ್ವಿನಿಯ  ತಂದೆಗೆ ವೈಮನಸ್ಸು ಉಂಟಾಗಿ ಅವರು  ಊರು  ಬಿಟ್ಟು ಹೋಗಿದ್ದರಿಂದ ಕಳೆದೇ ಹೋಯಿತು . 

           ಇದರಿಂದ ತುಂಬಾ ಬೇಸರದಲ್ಲಿ ಇದ್ದ  ಶಶಾಂಕ  ಓದು ವಿದ್ಯೆ ಎಲ್ಲದರಲ್ಲೂ ಅನಾಸಕ್ತಿಯಿಂದಿದ್ದ  ಅವನನ್ನು ಮತ್ತೆ ಓದಿನಲ್ಲಿ ತೊಡಗಿಸಿಕೊಳ್ಳಲು ಅವನ ತಂದೆ ಶ್ರೀಹರಿ ತುಂಬಾ ಕಷ್ಟ ಪಟ್ಟಿದ್ದರು. ಅಂತೂ ಎಲ್ಲ ಒಂದು ಹಂತಕ್ಕೆ ಬಂದು ಶಶಾಂಕ ಎಂ ಬಿ ಎ ಪೂರೈಸಿ ತಂದೆಯ  ಉದ್ಯಮವನ್ನು ಕೈಗೆ ತೆಗೆದುಕೊಂಡಾಗ ,ಮದುವೆಯ ಸಂಬಂಧಗಳು  ಬರುತ್ತಿದ್ದರೂ ಶಶಾಂಕ ಅವರಾರನ್ನು ನೋಡುವ  ಗೊಡವೆಗೆ ಹೋಗುತ್ತಿರಲಿಲ್ಲ, ಮಾತ್ರವಲ್ಲದೆ ತಾನು ಈಗ ಮದುವೆ ಆಗುವುದಿಲ್ಲವೆಂದು  ಆದ್ದರಿಂದ ಯಾವ  ಹುಡುಗಿಯನ್ನು ಕರೆಸುವುದು ಬೇಡವೆಂದು ತಂದೆಗೆ ತಾಕೀತು ಮಾಡಿದ್ದ.

              ಶ್ರೀ ಹರಿಗೂ  ತನ್ನ ದುಡುಕಿನಿಂದ  ಆತ್ಮೀಯ ಸ್ನೇಹಿತ  ಕೃಷ್ಣಮೂರ್ತಿಯನ್ನು  ಕಳೆದುಕೊಂಡ ಬೇಸರ ಆಗಾಗ ಕಾಡುತ್ತಿತ್ತು. .ಅವರನ್ನು ಹುಡುಕುವ ಪ್ರಯತ್ನವೂ ಫಲಿಸದೆ ಇದ್ದಾಗ ಅವರು ನಿರಾಶರಾಗಿದ್ದರು. ಕೆಲಸದ ಒತ್ತಡದಿಂದಾಗಿ ಎಲ್ಲಿಗೂ ಹೋಗಲಾಗದಿದ್ದ ಶಶಾಂಕ   ಗೆಳೆಯರ ಒತ್ತಾಯಕ್ಕೆ ಮಣಿದು  ಜಾತ್ರೆಗೆ ಬಂದಿದ್ದ. ಅಲ್ಲಿ  ತನ್ನ ಮೆಚ್ಚಿನ ಹುಡುಗಿ ಕಣ್ಣಿಗೆ ಕಂಡು ಕಾಣದಂತಾದುದು ಬಹಳ ಬೇಸರವಾಗಿತ್ತು.

              ಮರುದಿನ ಸಂಗೀತ ಕಚೇರಿ ಇದ್ದುದರಿಂದ ಗೆಳೆಯರೆಲ್ಲಾ  ಸಾಯಂಕಾಲ ಬೇಗನೆ   ದೇವಸ್ಥಾನದ ಪ್ರಾಂಗಣದಲ್ಲಿ ಸೇರಿದ್ದರು.ಇವರು ಅಲ್ಲಿಗೆ ಮುಟ್ಟುವಾಗ ಸಂಗೀತ ಕಚೇರಿ ಪ್ರಾರಂಭವಾಗಿದ್ದುದರಿಂದ ಅಲ್ಲೇ ಕಟ್ಟೆಗೆ ಒರಗಿ ನಿಂತು ಸಂಗೀತ ಕೇಳುತ್ತಿದ್ದ ಶಶಾಂಕನಿಗೆ ಸುಶ್ರಾವ್ಯವಾಗಿ ಹಾಡುತ್ತಿದ್ದ ಹಾಡು ಪುನಃ ಆ ಧ್ವನಿಯನ್ನು ನೆನಪಿಸಿ  ಮೈ ಪುಳಕಿತಗೊಂಡಿತು.ಕೈ ನಿಧಾನವಾಗಿ ಮೇಲೆತ್ತಿ ಮಹಾಲಿಂಗೇಶ್ವರ ದೇವರೆಡೆ ಕೈ ಮುಗಿಯಿತು.ಆತ ಗೆಳೆಯರನ್ನು ಅಲ್ಲೇ ಬಿಟ್ಟು ಒಂಟಿಯಾಗಿ ಜನಜಂಗುಳಿಯನ್ನು ಸರಿಸಿ ಮುಂದೆ ಮುಂದೆ ಹೋಗುತ್ತಿದ್ದ ಸಂಶಯವೇ ಇಲ್ಲ ಆಕೆ ನನ್ನ ಮನ್ವಿತಾಳೆ ಎನ್ನುವ ನಿರ್ಧಾರಕ್ಕೆ ಬಂದಾಗ ಆಕೆ ಕೈಗೆತ್ತಿಕೊಂಡ ಹಾಡು ತಾವಿಬ್ಬರು ಜಂಟಿಯಾಗಿ ಹಾಡಿದ ಅದೇ ಹಾಡು ಎನ್ನುವುದು ಖಾತ್ರಿಯಾದ ಕೂಡಲೇ ಆತ ತಟ್ಟನೆ ಸ್ಟೇಜ್ ಗೆ ನುಗ್ಗಿ  ಕಣ್ಣು.ಮುಚ್ಚಿ ಕುಳಿತ ಮನ್ವಿತಾಳ ಹತ್ತಿರ ಕುಳಿತು ತಾನೂ ಅದಕ್ಕೆ ರಾಗ ಸೇರಿಸಿದ.

             ತನ್ನ ರಾಗಕ್ಕೆ ಜಂಟಿಯಾಗಿ ಗಂಡಸಿನ ರಾಗ ಕೇಳಲು ಕಣ್ಣು ಬಿಟ್ಟ ಮನ್ವಿತಾಳಿಗೆ ಶಶಾಂಕನನ್ನು ಕಂಡು ಒಂದು ಕ್ಷಣ ಏನು ಮಾಡುವುದೆಂದು ತಿಳಿಯಲಿಲ್ಲ.ಮರುಕ್ಷಣ ಕಾರ್ಯಕ್ರಮ ಹಾಳಾಗಬಾರದೆಂದು ಮನಸ್ಸು ಗಟ್ಟಿ ಮಾಡಿ ಕೀರ್ತನೆಯನ್ನು ಮುಕ್ತಾಯಗೊಳಿಸಿ  ,ಒಳಗೆ ಹೋಗಬೇಕೆಂದಿದ್ದಾಗ ಶಶಾಂಕ ಮೃದುವಾಗಿ ಮನ್ವಿತಾ ಎಂದು ಕರೆದಾಗ ಬೆಚ್ಚಿ ಬಿದ್ದ ಆಕೆ ಒಂದು.ಕ್ಷಣ ಅವನನ್ನು ನೋಡಿ ಮರುಕ್ಷಣವೇ ಸರ ಸರನೆಂದು ಹೊರಟು  ಹೋದಳು.

               ಕಾರ್ಯಕ್ರಮದ ನಿರೂಪಕರು ಈ ಅನಿರೀಕ್ಷಿತ ದಿಂದ ಗಾಬರಿಯಾದರೂ ಕಾರ್ಯಕ್ರಮ ಸಾಂಗವಾಗಿ.ಮುಕ್ತಾಯವಾಗಿದ್ದರಿಂದ ಶಶಾಂಕನನ್ನು ಅಭಿನಂದಿಸಿ ಅವನನ್ನು ಒಂದು ಹಾಡು ಹಾಡಲು ಒಪ್ಪಿಸಿ ಅಲ್ಲಿಯೇ ಅವನಿಂದ ಕೀರ್ತನೆಯನ್ನು ಹಾಡಿಸಿಯೇ ಬಿಟ್ಟರು ತುಂಬಿದ ಪ್ರೇಕ್ಷಗರ ಚಪ್ಪಾಳೆ ಯ ಜತೆ ಒನ್ಸ್ ಮೋರ್ ಎನ್ನುವ ಕೂಗು  ಕೇಳಿ ಸತತವಾಗಿ ನಾಲ್ಜೈದು  ಹಾಡು ಹೇಳಿದ ಶಶಾಂಕ ಹೊರಗೆ ಬರುವಾಗ  ಅವಳು ಎಲ್ಲಿಯೂ ಕಾಣಲೇ ಇಲ್ಲ. ವ್ಯವಸ್ಥಾಪಕರನ್ನು ವಿಚಾರಿಸಿ ಅವರ ಮನೆ ವಿಳಾಸ ಪಡೆದುಕೊಂಡ ಶಶಾಂಕ ಮರುದಿನ ಅವರ ಮನೆಗೆ ಹೋಗ ಬೇಕೆಂದು ನಿಶ್ಚೈಸಿ  ಗೆಳೆಯರ ಜತೆ ಹೊರಟು ಬಂದ.

              ಗೆಳೆಯರಿಗೆ ಇವನ ನಡತೆ ಪ್ರಶ್ನಾರ್ಥಕವಾಗಿದ್ದರೂ , ಅಷ್ಟು ಜನರ ಮದ್ಯೆ ಗೆಳೆಯನ ಹಾಡು ಎಲ್ಲರ ಮನಸೆಳೆದುದು ಖುಷಿಯಾಗಿ ಅವನನ್ನು ಅಭಿನಂದಿಸಿದರು. 

               ಮರುದಿನ ಅವರ ಮನೆ ಪತ್ತೆ ಹಚ್ಚಿ ಹೋದ ಶಶಾಂಕನನ್ನು ಕಂಡು ಕಣ್ಣು ಒದ್ದೆ ಮಾಡಿಕೊಂಡ ಮನ್ವಿತಳ ತಾಯಿ ತಾವು ಈ  ಊರಿಗೆ  ಬಂದಂದಿನ ಎಲ್ಲಾ ವಿಷಯವನ್ನು ಹೇಳಿ ಮನ್ವಿತಳಿಗೆ ಬೇಗನೆ ಮದುವೆ ಮಾಡಬೇಕು ಆದರೆ ಆಕೆ ಯಾರನ್ನು ಒಪ್ಪುವುದಿಲ್ಲವೆಂದು ತನ್ನ ಮನಸ್ಸಿನ ಬೇಸರವನ್ನು ತೋಡಿಕೊಳ್ಳುತ್ತಾರೆ. ಅವರು ಇರುತ್ತಿದ್ದರೆ ಈ ರೀತಿ ನಾವು  ಕಷ್ಟಪಡಬೇಕಾಗಿರಲಿಲ್ಲ ಎಂದು ಹನಿಗಣ್ಣಾಗುತ್ತಾರೆ ಶಶಾಂಕ ಅವರಿಗೆ ದೈರ್ಯ ತುಂಬಿ   ಹೊರಡಬೇಕೆಂದಿದ್ದಾಗ ಮನ್ವಿತಾ ಅಲ್ಲಿಗೆ  ಬಂದು ಶಶಾಂಕನನ್ನು ಕಂಡು ದಂಗಾದಳು.  

            ಕೂಡಲೇ ಶಶಾಂಕ ಅವಳ ಕೈಯನ್ನು ಹಿಡಿದು ಮಾನ್ವಿ ಕೊನೆಗೂ ನೀನು  ನನಗೆ ಸಿಕ್ಕಿದೆ ನಿನ್ನನ್ನು ನಾನು ಹುಡುಕದ ಸ್ಥಳವೇ ಇಲ್ಲ ಮಾಹಾಲಿಂಗೇಶ್ವರ ದೇವರೇ ನಮ್ಮಿಬ್ಬರನ್ನು  ಒಂದುಗೂಡಿಸಿದ . ಇನ್ನು ಖಂಡಿತ ನೀನು ನನ್ನ ಬಿಟ್ಟು ಹೋಗಲು ನಾನು ಅವಕಾಶ ಕೊಡುವುದಿಲ್ಲ. ಇಂದೇ ನನ್ನ ತಂದೆಯನ್ನು ಒಪ್ಪಿಸಿ ನಿನ್ನನ್ನು ಮದುವೆ ಆಗುವೆ ನಿನಗೆ ಇದು ಒಪ್ಪಿಗೆ ತಾನೇ ಎಂದು ಕೇಳುತ್ತಾನೆ .

              ನಾಚಿಕೆಯಿಂದ ತಲೆ ತಗ್ಗಿಸಿದ  ಮನ್ವಿತಾಳ ಮೊಗದಲ್ಲಿ ಕೆಂಪಿನ ಛಾಯೆ ಮೂಡಿ ಬಾನಿನಲಿ ಮೂಡಿದ ರವಿಯ ಹೊನ್ನಕಿರಣದ  ಜತೆ ಸ್ಪರ್ಧೆಗಿಳಿಯಿತು.


ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...