ಸಂಕ್ಷಿಪ್ತ ರಾಮಾಯಣ ಭಾಗ 1 ಚಿಲಿಪಿಲಿ
ಮನೋಲ್ಲಾಸ
4 ಮಂಥರೆಯ ಕುತಂತ್ರ
(ಪರಿವರ್ಧಿನಿ ಷಟ್ಪದಿ ಯಲ್ಲಿ)
ಪಂಕಜಾ.ಕೆ. ರಾಮಭಟ್
ಕೋಸಲ ದೇಶದ ರಾಜನು ದಶರಥ
ಹಾಸವ ಬೀರುತ ಮಡದಿಯರೊಡನೆಯೆ
ತೋಷದಿ ರಾಜ್ಯವ ಪಾಲಿಸುತಿದ್ದನಯೋಧ್ಯಾ ನಗರದಲಿ
ಕೂಸೊಂದಿಲ್ಲದ ಚಿಂತೆಯು ಕಾಡಲು
ಬೇಸರ ಮೂಡಿತರಸನಾ ಮನದಲಿ
ಸಾಸಿರ ಮುನಿಗಳ ಕರೆಸುತಲವರಲಿ ಸಲಹೆಯ ಕೇಳಿದನು
ಮಾಡಿದ ಯಾಗವ ಪುತ್ರನ ಪಡೆಯಲು
ಬೇಡಿದ ದೇವನ ಚರಣಕೆ ನಮಿಸುತ
ಹಾಡುತ ನಾಮವ ಬಕುತಿಯಲವನನು ಮನದಲಿ ಧೇನಿಸುತ
ಮಾಡಿದ ಯಜ್ಞದ ಪುಣ್ಯದ ಫಲದಲಿ
ಮೂಡಿತು ಗರ್ಭದಿ ಮಕ್ಕಳ ಕಲರವ
ದೂಡಿತು ರಾಜನ ಚಿಂತೆಯು ರಾಣಿಯರೆಲ್ಲರು ಹಡೆಯುತಲಿ
ಮುದ್ದಿನ ಮಕ್ಕಳು ಬೇಗನೆ ಬೆಳೆಯಲು
ಮುದ್ದಿಸಿ ಕಲಿಸಿದನವರಿಗೆ ವಿದ್ಯೆಯ
ಗದ್ದುಗೆಯೇರುವ ಸಮಯವು ಬರುತಿರೆ ತೋಷವು ಮನದಲ್ಲಿ
ಗದ್ದಲ ಮಾಡುತ ಪುರಜನರೆಲ್ಲರು
ಸಿದ್ಧತೆ ಮಾಡಲು ಸರಸರ ಸರಿಯುತ
ಸದ್ದಿಲ್ಲದೆಯೇ ನೆರೆದರು ಹರುಷದಿ ಹಾರಿಸಿ ಭಾವುಟವ
ಮಂಥರೆ ಮಾತನು ಕೇಳಿದ ಕೈಕೆಯಿ
ಮಂಥನ ಮಾಡುತ ಮನದಲಿ ಯೋಚಿಸಿ
ಪಂಥದಿ ಪಡೆದಿಹ ವರಗಳ ಕೇಳಲು ನಡೆದಳು ರಾಜನೆಡೆ
ಅಂತಃಪುರದೆಡೆ ಬರುತಿಹ ಸಖನೆಡೆ-
-ಯಂತರ ಕಾಯುತ ಕೇಳಿದಲೊಲವಲಿ
ಚಿಂತೆಗೆ ಹಚ್ಚುವ ಮಾತೊಂದರುಹಲು ದಶರಥ ನೊಂದಿಹನು
ಪಂಕಜಾ.ಕೆ. ರಾಮಭಟ್
Comments
Post a Comment