11 ರಾಮನ ವನವಾಸ ರಾಮಾಯಣ ಬಾಗ 2
ಪರಿವರ್ಧಿನಿ ಷಟ್ಪದಿ
ಪಂಕಜಾ.ಕೆ. ರಾಮಭಟ್
ಮಡದಿಯ ಮಾತನು ಕೇಳಿದ ದಶರಥ
ಬುಡವನು ಕಡಿದಿಹ ಬಾಳೆಯ ತೆರದೊಳ-
-ಗೊಡನೆಯೆ ಬಿದ್ದನು ಮತಿಯನು ಕಳೆಯುತ ಮನದಲಿ ನೋಯುತಲಿ
ಬಿಡದಿಯಲೆಲ್ಲೆಡೆ ಹರಡಿದ ಸುದ್ದಿಯು
ಬಿಡದೆಯೆ ತಲುಪಿತು ರಾಮನ ಕಿವಿಯನು
ಗಡಿಬಿಡಿಯಿಂದಲಿ ತಂದೆಯ ಕಾಣಲು ಬಂದನು ತ್ವರಿತದಲಿ
ತಂದೆಯ ನೋವಿನ ಕಾರಣ ಕೇಳಲು
ಮುಂದೆಯೆ ನಿಲ್ಲುತ ತಿಳಿಸಿದನವನಲಿ
ಕುಂದಿದ ಮೊಗದಲಿ ಬೇಸರ ತೋರುತ ತನ್ನಯ ವರಗಳನು
ಬಂದಿಹ ಕಷ್ಟಗಳರಿಯಲು ರಾಮನು
ತಂದೆಯ ಮಾತನು ಪಾಲಿಪೆನೆನ್ನುತ
ಮಂದಿಯರೆಲ್ಲರ ಹಿಂದೆಯೆ ಬಿಡುತಲಿ ನಡೆದನು ಕಾಡಿನೆಡೆ
ಸೀತೆಯು ಪತಿಯನ್ನನುಸರಿಸುತ್ತಲಿ
ಮಾತೆಯ ಚರಣಕ್ಕೆರಗುತ ಬೇಡಲು
ಭೀತಿಯ ತೋರುತ ಹರಸಿದಲೊಲವಲಿ ಜಾನಕಿ ದೇವಿಯನು
ಜಾತಕ ಪಕ್ಷಿಯ ತೆರದಲಿ ಲಕ್ಷ್ಮಣ
ಪಾತಕಿ ಕೈಕೆಯ ನಿಂದಿಸುತಿರುತಲಿ
ಕಾತುರದಿಂದಲಿ ರಾಮನ ಜತೆಯಲಿ ನಡೆದನು ತವಕದಲಿ
ವನವಾಸಕೆ ಹೊರಟಿಹ ರಾಮನ ಜತೆ
ಜನಕನ ಕುವರಿಯು ಹೊರಟಳು ನಗುತಲಿ
ಮನದಲಿ ತುಂಬಿದ ದುಗುಡವ ಸರಿಸುತ ನಾರಿನ ಮಡಿಯುಟ್ಟು
ಬನದಲಿ ನಡೆಯುತ ಬಳಲಿದ ಮೂವರು
ತಿನುತಲಿ ಕಾಡಲಿ ಬೆಳೆದಿಹ ಫಲಗಳ
ಮನಸಿನ ಚಿಂತೆಯು ಕಳೆಯಲು ಬೇಗನೆ ಕಣ್ಣನು ಮುಚ್ಚಿದರು
ದಶರಥ ರಾಜನು ದುಃಖದಿ ನರಳುತ
ವಶವನು ಕಳೆದನು ತನುಮನವೆಲ್ಲವ
ನಶೆಯಲಿ ಬೀಳುತ ಬಿಟ್ಟನು ತನ್ನಯ ಪ್ರಾಣವ ಕ್ಷಣದಲ್ಲೇ
ಕಸಿವಿಸಿಗೊಂಡಿಹ ಮನದಲಿ ಮಂತ್ರಿಯು
ಕುಸಿಯುವ ಜೀವವ ಕರದಲಿ ಹಿಡಿಯುತ
ತುಸುವೇ ಸಮಯದಿ ಕರೆಸಿದ ಭರತನ ವಿಷಯವನರುಹುತಲಿ
ನಡೆದಿಹ ಘಟನೆಯ ಕೇಳಿದ ಭರತನು
ಗಡಿಬಿಡಿಯಿಂದಲಿ ಸರಸರ ಸರಿಯುತ
ಲೊಡನೆಯೆ ಬಂದನು ವೇಗದಿ ಪುರದೆಡೆ ರಾಮನ ಧೇನಿಸುತ
ತೊಡೆಯುತ ಕಣ್ಣಿನ ನೀರನು ಕರದಲಿ
ಬಿಡದಿಯಲಿಳಿಯದೆ ಕರೆದನು ಸಕಲರ
ತಡವನು ಮಾಡದೆ ನಡೆದನು ತಾಯಿಯನರಸುತ ಬಿಡದಿಯೆಡೆ
ಮರಳಿದ ಭರತನು ವಿಷಯವ ತಿಳಿಯಲು
ಕೆರಳಿದ ತಕ್ಷಣ ಮಾತೆಯ ಮೇಲೆಯೆ
ಹರಿಸಿದ ಮಾತಿನ ಬಾಣವನವಳೆಡೆ ದುಃಖದಿ ಕುಸಿಯುತಲಿ
ಸರಸರ ಸರಿಯುತ ಮಂತ್ರಿಯ ಜತೆಯಲಿ
ಭರದಲಿ ಹೊರಟನು ರಾಮನನರಸುತ
ಕರೆತರುವೆನವನನೆನುತಲಿ ನಡೆದನು ಕಾಡಿನ ದಾರಿಯಲಿ
ಪಂಕಜಾ.ಕೆ. ರಾಮಭಟ್
Comments
Post a Comment