ರಾಮಾಯಣ ಭಾಗ 4
27 ಚಿನ್ನದ ಜಿಂಕೆ ಮನೋಲ್ಲಾಸ
ಪರಿವರ್ಧಿನಿಷಟ್ಪದಿ..
ವನದಲಿ ತಿರುಗುತ ಗುಡಿಸಲು ಕಟ್ಟುತ
ಮನದಲಿ ಬೇಸರವಿದ್ದರು ತೋರದೆ
ಜನಕನ ಕುವರಿಯ ಜತೆಯಲಿ ರಾಮನು ಹರುಷದಿ ಕೂಡುತಲಿ
ಅನುಜನು ಲಕ್ಷ್ಮಣ ಜತೆಯಲ್ಲಿರುತಿರೆ
ಬೆನಕನ ದಯೆಯಲಿ ದಿನಗಳು ಕಳೆಯಲು
ಕನಸಿನ ತೆರದಲಿ ಜೀವನ ಸಾಗಿತು ಕಾಡಲಿ ನಡೆಯುತಲಿ
ಸುಂದರ ಜಿಂಕೆಯ ಕಾಣುತ ಸಾದ್ವಿಯು
ನಂದನ ರಾಮನ ಕರೆದಳು ಬೇಗನೆ
ಚಂದದ ಹರಿಣವು ಬೇಕೆನಗೆನ್ನುತ ಹಠವನು ಮಾಡಿದಳು
ಚಂದಿರ ವದನೆಯೆ ಕೇಳೆನ್ನುತಲೀ
ಮಂಧರಧರ ಶ್ರೀರಾಮನು ತಿಳಿಸಿದ
ನಂದಿನಿ ಪೇಳ್ವೆನು ನಿಜವಲ್ಲವಿದೂ ರಾಕ್ಷಸ ಮಾಯೆಯದು
ಸೀತೆಯ ಕೋಪಕೆ ಹೆದರಿದ ರಾಮನು
ಮಾತೊಂದರುಹುತ ಲಕ್ಷ್ಮಣನೊಡನೆಯೆ
ಮಾತೆಯ ನೆನೆಯುತ ಹರಿಣವ ಹಿಡಿಯಲು
ಹೊರಟನು ಕಾಡಿನೆಡೆ
ನೀತಿಯ ಪಾಠವ ಮನದಲಿ ಪಠಿಸುತ
ಭೀತಿಯ ತೋರದೆ ಲಕ್ಷ್ಮಣನೊಡನೆ
ನಾಥನು ಬರುವ ದಾರಿಯ ನೋಡುತ ಹರಿಣಿಯು ಬಳಲಿದಳು
ಹರಿಣವ ಹಿಡಿಯಲು ಹೊರಟಿಹ ರಾಮನು
ಬರದಿರೆ ಭಯವದು ಮೂಡಿತು ಮನದಲಿ
ಕರೆಯುವ ರಾಮನ ದನಿಯನು ಕೇಳಲು ಜಾನಕಿ ಬೆದರಿದಳು
ತರುಣಿಯು ಕರೆದಳು ಲಕ್ಷ್ಮಣನನುತಾ
ಭರದಲಿ ಹೋಗೆಂದೆನುತಲಿ ಕಳುಹಲು
ಸರಸರ ಬಂದನು ರಾವಣನಲ್ಲಿಗೆ ವೇಶವ ಹಾಕುತಲಿ
ಕರೆಯುತ ಕೇಳಿದ ದಾನವ ನೀಡಲು
ಹರಿಸತಿ ಬೇಗನೆ ಭಿಕ್ಷೆಯನಿಕ್ಕಲು
ಸರಸಕೆ ಕರೆದನು ರಾವಣ ತನ್ನಯ ರೂಪವ ತೋರುತಲಿ
ಭಯದಲಿ ಕಂಪಿಸುತಿರುತಿಹ ತರಳೆಯ
ದಯೆಯನು ತೋರದೆ ಹಿಡಿದನು ಮುಡಿಯನು
ಮಯಣದ ತೆರದಲಿ ಹೊಳೆಯುವ ಪುಷ್ಪಕ ವಾಹನದೆಡೆಸೆಳೆದು
ಹಯವನ್ನೇರಿದ ದುರುಳನು ಬೇಗನೆ
ಜಯಿಸುವೆನವಳನು ಕ್ಷಣದಲ್ಲೆನುತಲಿ
ಜಯಜಯವೆನ್ನುತ ಹೊರಟನು ಸೀತೆಯ ಜತೆಯಲಿ ಲಂಕೆಯೆಡೆ
ಅಳುತಿಹ ಸೀತೆಯ ಕಣ್ಣಿಗೆ ಕಂಡಿತು
ಕೆಳಗಿಹ ವಾನರ ವೀರರ ಮನೆಗಳು
ಕಳೆದಳು ತನ್ನಯ ವಸ್ತ್ರಾಭರಣಗಳ ಗಂಟನು ಕಟ್ಟುತಲಿ
ಸೆಳೆದಳು ಕಟ್ಟಿದ ಬಟ್ಟೆಯ ತುಂಡನು
ಕೆಳಗಡೆ ಬೀಳುವ ತೆರದಲ್ಲವುಗಳ
ತಿಳಿಯಲಿ ನಾಥನು ತನ್ನನ್ನೊಯ್ದಿಹ ದಾರಿಯ ಬೇಗದಲಿ
ಲಂಕೆಯ ಸೇರಲು ರಾವಣ ನಗುತಲಿ
ಬಿಂಕದಿ ತೋರಿದ ತನ್ನಯ ರಾಜ್ಯವ
ಶಂಕರಿ ಬಾನನ್ನೆಡೆಗೆನ್ನುತಲೀ ಬಾಗಿದ ಹರಿಣಿಯೆಡೆ
ಕಂಕಣ ತೊಟ್ಟಿಹ ತನ್ನಯ ಕರಗಳ
ಪಂಕಜಲೋಚನೆ ಮುಗಿಯುತ ಮನದಲಿ
ಸಂಕಟ ತೊಲಗಲು ರಾಮನ ಜಪವನು ಬೇಗನೆ ಮಾಡಿದಳು
ಪಂಕಜಾ.ಕೆ. ರಾಮಭಟ್.
Comments
Post a Comment