ಪುರಾಣದ ಕಥೆ
ಲಕ್ಷ್ಮಣ ರೇಖೆ
ಪಿತೃವಾಕ್ಯ ಪರಿಪಾಲಕನಾದ ಶ್ರೀ ರಾಮಚಂದ್ರನು ಹದಿನಾಲ್ಕು ವರ್ಷ ವನವಾಸಕ್ಕೆಂದು ಹೊರಟಾಗ ಪತಿವ್ರತಾ ಶಿರೋಮಣಿಯಾದ ಶ್ರೀ ರಾಮನ ಹೆಂಡತಿ ಸೀತಾಮಾತೆಯೂ ಅವರೊಂದಿಗೆ ಹೊರಟಳು ಕಾಡು ಮೇಡುಗಳಲಿ ಹಣ್ಣುಗಳನ್ನು ತಿನ್ನುತ್ತಾ ಅವರು ಅಲ್ಲಿ ಒಂದು ಪರ್ಣಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾಗ, ಮಾರೀಚನೆಂಬ ಮಾಯಾವಿ ರಾಕ್ಷಸನು ಸೀತಾದೇವಿಯನ್ನು ಆಕರ್ಷಿಸಲು ಚಿನ್ನದ ಜಿಂಕೆಯ ರೂಪ ತಾಳಿ ಪರ್ಣ ಕುಟೀರದ ಸುತ್ತುಮುತ್ತಲಿನ ಸ್ಥಳಗಳಲ್ಲಿ ತಿರುಗಾಡುತ್ತಿದ್ದನು ..ಚಿನ್ನದ ಜಿಂಕೆಯನ್ನು ಕಂಡ ಸೀತಾದೇವಿಗೆ ಅದರ ಮೇಲೆ ಮೋಹವುಂಟಾಗಿ, ಆಕೆ ತನ್ನ ಗಂಡ ಶ್ರೀರಾಮಚಂದ್ರನಲ್ಲಿ ಅದನ್ನು ಜೀವಂತವಾಗಿ ತಂದು ಕೊಡುವಂತೆ ಪೀಡಿಸುತ್ತಾಳೆ. ಶ್ರೀ ರಾಮನು ಎಷ್ಟೆಷ್ಟೋ ಸಮಾಧಾನ ಮಾಡಿದರೂ ಸೀತಾದೇವಿ ತನ್ನ ಹಠವನ್ನು ಬಿಡುವುದಿಲ್ಲ .ಅದು ರಾಕ್ಷಸರ.ಮಾಯೆ ನಿಜವಾದ ಜಿಂಕೆಯಲ್ಲ ಎಂದು ಹೇಳಿದರೂ ಸೀತಾದೇವಿ ತನ್ನ ಆಸೆಬಿಡದೆ ತನಗೆ ಅದು ಬೇಕೇ ಬೇಕೆಂದು ಹಠ ಹಿಡಿಯುತ್ತಾಳೆ. ಗತ್ಯಂತರವಿಲ್ಲದೆ ಶ್ರೀರಾಮನು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ .ಹೋಗುವಾಗ ತನ್ನ ತಮ್ಮ ಲಕ್ಷ್ಮಣ ನನ್ನು ಸೀತಾದೇವಿಯ ರಕ್ಷಣೆಗೆ ನಿಲ್ಲಿಸಿ ತಾನು ಬಿಲ್ಲು ಬಾಣ ತೆಗೆದುಕೊಂಡು ಜಿಂಕೆಯನ್ನು ಹಿಡಿಯಲು ಹೋಗುತ್ತಾನೆ ಮಾಯಾವಿಯಾದ ಜಿಂಕೆ ರಾಮನನ್ನು ಆಟವಾಡಿಸುತ್ತ ಕೈಗೆ ಸಿಕ್ಕಿಯೂ ಸಿಕ್ಕದಂತೆ ಜಾರಿಕೊಂಡು ಓಡುತ್ತಾ ನೆಗೆಯುತ್ತಾ ದಿಕ್ಕು ತಪ್ಪಿಸುತ್ತಿತ್ತು.ಅದನ್ನು ಕೊಲ್ಲದೆ ಜೀವಂತ ತರಲು ಸೀತಾದೇವಿಯ ಆಜ್ಞೆಯಾಗಿದ್ದರಿಂದ ಕೊಲ್ಲುವಂತೆಯೂ ಇರಲಿಲ್ಲ. ಜಿಂಕೆಯು ಶ್ರೀ ರಾಮನನ್ನು ದೂರ ದೂರಕ್ಕೆ ಸೆಳೆದೊಯ್ದಿತು. ಕೊನೆಗೆ ಅನಿವಾರ್ಯವಾಗಿ ಶ್ರೀ ರಾಮನು ಅದರ ಮೇಲೆ ಬಾಣ ಪ್ರಯೋಗ ಮಾಡಬೇಕಾಯಿತು. ಶ್ರೀರಾಮನ ಬಾಣಕ್ಕೆ ಗುರಿಯಾದ ಜಿಂಕೆ ಸಾಯುವಾಗ ಹಾ ಸೀತೆ..ಹಾ .ಲಕ್ಷ್ಮಣ ಎಂದು ಶ್ರೀ ರಾಮನ ದನಿಯಲ್ಲಿ ಕೂಗಿ ಪ್ರಾಣ ಬಿಟ್ಟಿತು.
ಇತ್ತ ಪರ್ಣಕುಟೀರದಲ್ಲಿದ್ದ ಸೀತೆ ಹಾಗೂ ಲಕ್ಷ್ಮಣನಿಗೆ ಈ ಆಕ್ರಂದನವು ಕೇಳಿ ಸಿಡಿಲು ಬಡಿದಂತಾಯಿತು. ಅದು ರಾಕ್ಷಸರ ಮಾಯೆಯಿರಬಹುದೆಂಬ ಸಂಶಯ ಲಕ್ಷ್ಮಣನಿಗೆ ಬಂತು .ಆತ ಸೀತಾದೇವಿಯನ್ನು ಸಮಾಧಾನ ಪಡಿಸಿದ .ಆದರೆ ಸೀತಾದೇವಿಯು ಕಟುಮಾತುಗಳಿಂದ ಲಕ್ಷ್ಮಣನನ್ನು ನಿಂದಿಸಿ ಶ್ರೀ ರಾಮನ ಸಹಾಯಕ್ಕೆ ಕೂಡಲೇ ಹೊರಟು ಹೋಗಲು ತಿಳಿಸಿದಳು .ಅತ್ತಿಗೆಯ ಕಟುಮಾತುಗಳನ್ನು ಕೇಳಲಾರದೆ ಅತ್ತಿಗೆಯ ಆಜ್ಞೆಯಂತೆ. ಧ್ವನಿ ಬಂದ ದಿಕ್ಕಿನತ್ತ ಲಕ್ಷ್ಮಣ ಹೊರಡುತ್ತಾನೆ. ಹೋಗುವ ಮೊದಲು ಲಕ್ಷ್ಮಣನು ಸೀತಾದೇವಿಯ ಸುರಕ್ಷತೆಗಾಗಿ ಕುಟೀರದ ಹೊರಗೆ ಮೂರು ಗೆರೆಯನ್ನು ಎಳೆದು ಅಭಿಮಂತ್ರಿಸಿ ಅಣ್ಣನನ್ನು ಕಾಣಲು ತೆರಳಿದನು.ಇದೇ ಸಂದರ್ಭಕ್ಕೆ ಕಾದಿದ್ದ ರಾವಣನು ಸನ್ಯಾಸಿಯ ವೇಷ ಧರಿಸಿ ಸೀತಾದೇವಿಯಲ್ಲಿ ಭಿಕ್ಷೆ ಬೇಡಿ ಆಕೆ ಲಕ್ಷ್ಮಣ ರೇಖೆಯನ್ನು ಮೀರಿ ಹೊರಗೆ ಬರುವಂತೆ ಮಾಡಿ ಆಕೆಯನ್ನು ಅಪಹರಿಸುತ್ತಾನೆ.ಇದು ಮುಂದೆ ರಾವಣನ ಸಂಹಾರಕ್ಕೆ ಕಾರಣವಾಗುತ್ತದೆ.ಇಲ್ಲಿ ಸೀತೆಯ ಹಠ ಲಕ್ಷ್ಮಣ ರೇಖೆಯನ್ನು ಮೀರಿ ನಡೆದ ಫಲ ಸೀತಾದೇವಿಯನ್ನು ರಾವಣನು ಅಪಹರಿಸಲು ಕಾರಣವಾಯಿತು. ಇಲ್ಲಿ ಹಾಕಿದ ಲಕ್ಷ್ಮಣರೇಖೆ ಸೀತಾದೇವಿಗೆ ಮಾತ್ರವಲ್ಲದೆ ಪ್ರಪಂಚದ ಎಲ್ಲರಿಗೂ ಅನ್ವಯಿಸುತ್ತದೆ.ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ನೈತಿಕ ಕಟ್ಟುಪಾಡುಗಳು ಲಕ್ಷ್ಮಣರೇಖೆಯಾಗಿದೆ.ಅವುಗಳನ್ನು ಮೀರಿ ನಡೆದರೆ ಅನಾಹುತ ತಪ್ಪಿದ್ದಲ್ಲ ಎನ್ನುವುದನ್ನು ರಾಮಾಯಣದ ಈ ಪ್ರಕರಣದಿಂದ ತಿಳಿಯಬಹುದು
ಶ್ರೀಮತಿ.ಪಂಕಜಾ.ಕೆ. ಮುಡಿಪು
Comments
Post a Comment