Skip to main content

ಗುರುಭ್ಯೋ ನಮಃ

 ಗುರುಭ್ಯೋ ನಮಃ

(ಭಾಮಿನಿ ಷಟ್ಪದಿ )


ಗುರುವೆ ನಿನ್ನಯ ಚರಣ ಕಮಲಕೆ 

ಶಿರವ ಬಾಗಿಸಿ ನಮಿಸುತಿರುವೆನು

ಹರಸುಯೆನ್ನನು ಮತಿಯ ಕರುಣಿಸಿ ಅಭಯ ತೋರುತಲಿ 

ಬರಿದೆ ನಾಮವ ಪಠಿಸುತಿರುತಲಿ

ಹರನ  ರೂಪದ ಗುರುವ ನೆನೆಯಲು

ಕರಗಿ ಹೋಯಿತು ಸಕಲ ಕಷ್ಟಗಳೆಲ್ಲ ಬೇಗದಲಿ


ತಂದೆ ರಾಮನ ಕಥೆಯ ಹೇಳುತ

ಚಂದದಿಂದಲಿ ಹಾಡಿ ಹೊಗಳುತ

ನಿಂದೆ ನೀ ಜಗದಲ್ಲಿ  ಬಾನಿನ ತಾರೆಯಂತಿರುತ

ತಂದೆಯಂತೆಯೆ  ಶಿಷ್ಯ  ಗಡಣವ 

ಹಿಂದೆ  ನೀನಿರುತಿದ್ದು ನಡೆಸುತ

ಮುಂದೆ  ಸಾಗಲು  ಮುಕುತಿ ಮಾರ್ಗವ ತೋರಿ  ಹರಸುತ್ತ


ಮಾತು ಬಾರದ ಗೋವು ಸಂತತಿ

ಭೀತಿಗೊಳಗಾಗಿರುವ ಸಮಯದಿ

ಜಾತಿ ಬೇಧವ ಮರೆತು  ಗೋವಿನ ರಕ್ಷಣೆಗೆ ನಿಂತೆ

ಖ್ಯಾತಿ ಬಯಸದೆ ಮಗುವ ತೆರದಲಿ

ನೀತಿ ನಿಯಮವ ಪಾಲಿಸುತ್ತಲಿ

ಜ್ಯೋತಿಯಂತೆಯೆ ಜಗವ ಬೆಳಗಲು ಫಣವ ತೊಟ್ಟಿರುವೆ 

 

ಹಾದಿ ತಪ್ಪಿದ  ಜನರ ಸೇರಿಸಿ

ಸಾಧಿಸುವ ಛಲವನ್ನು ಬಿತ್ತುತ 

ಮೇದಿನಿಯಲೆಲ್ಲೆಡೆಗೆ ನಿನ್ನಯ ಛಾಪನೊತ್ತಿ ರುವೆ

ಬಾಧಿಸುವ ಚಿಂತೆಗಳ  ತೊಳೆಯುತ

ಬಾಧೆ ಕಳೆಯುತಲವರ ಮನಸಿಗೆ

ಹಾದಿ ತೋರುವ ದಾರಿ ದೀಪದ  ತೆರದಲಿರುತಿರುವೆ


ರಾಘವೇಶ್ವರನೆಂಬ  ನಾಮದಿ 

ಸಾಗಿ ಬರುತಿರಲಾಗ ಸಭೆಯೆಡೆ 

ಬಾಗಿ ನಮಿಸುವರೆಲ್ಲ ಗುರುವಿನ ಚರಣ ಧೇನಿಸುತ

ಬೇಗ ಬೇಗನೆ ನಡೆದು ಬರುತಲಿ 

ನೀಗಿಸುವೆ ನೀಯವರ ಕಷ್ಟವ

ಸೋಗು ಹಾಕದೆ ಕರುಣೆಯಿಂದಲಿ ಹರಸಿ ಹಾರೈಸಿ


ಬಂಧಿಸುವ ಮಂದಿಯರ ಕೆಡವುತ

ಸಂಧಿ ಕಾಲದಿ ರಾಮನಾಮವ 

ನಿಂದು ಪಠಿಸುವ ಭಾಗ್ಯವನು ನೀ ಕೊಟ್ಟು ಸಲಹೆನ್ನ

ಚಂದದಿಂದಲಿ ನಿನ್ನ ನಾಮವ

ಮುಂದೆ ನಿಲ್ಲುತ ಪಾಡಿ ಹೊಗಳುತ

ವಂದಿಸುವೆ ಗುರು ನಿನ್ನ ಚರಣಕೆ ತಲೆಯ ಬಾಗುತ್ತ

ಪಂಕಜಾ.ಕೆ.ರಾಮಭಟ್. ಮುಡಿಪು 









Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020