ನಿರ್ಧಾರ (ಸಣ್ಣ ಕಥೆ)
ಇದು ಹಿರಿಯರು ನಿಶ್ಚಯಿಸಿದ ಮದುವೆ ಬೇಡ ಎಂದು ನಿರಾಕರಿಸಲು ನಾನೇನು ಕುಂಟನೆ ಕುರುಡನೆ? ಮಧು ತನ್ನಷ್ಟಕ್ಕೆ ಗೊಣಗಿದರೂ ಅದನ್ನು ಕೇಳಿಸಿಕೊಂಡ ಶಾರ್ವರಿ ಅಯ್ಯೋ ಭಾವ ನೀವು ಕುರುಡರೂ ಅಲ್ಲ ಕುಂಟರೂ ಅಲ್ಲ ನಿಮ್ಮಂತಹ ಉತ್ತಮ ಗುಣದ ಹುಡುಗ ಸಿಗಲು ನಿಜಕ್ಕೂ ಪುಣ್ಯ ಮಾಡಿರಬೇಕು ಆದರೆ ನನ್ನ ಮನಸ್ಸಿನಲ್ಲಿರುವ ಹುಡುಗನೇ ಬೇರೆ ದಯವಿಟ್ಟು ಅರ್ಥಮಾಡಿಕೊಳ್ಳಿ ನೀವೇ ನನ್ನ ತಂದೆ ತಾಯಿಗೆ ಇದನ್ನು ದಯವಿಟ್ಟು ತಿಳಿಸಬೇಕು ಅಷ್ಟು ಹೇಳಿದ ಶಾರ್ವರಿ ಸರ ಸರ ಎಂದು ಅಲ್ಲಿಂದ ಸರಿದು ಹೋದಳು.
ಏನೂ ಮಾಡಲು ತೋರದೆ ಮಧು ಒಂದು ಕ್ಷಣ ಮೂಕನಂತೆ ನಿಂತು ಬಿಟ್ಟ ನಂತರ ಅಲ್ಲಿಂದ ತಾನೂ ಸರಿದು ಅಲ್ಲೇ ಹತ್ತಿರ ಇದ್ದ ದೇವಸ್ಥಾನಕ್ಕೆ ಬಂದು ದೇವರ ಗರ್ಭ ಗುಡಿಯ ಮುಂದೆ ನಿಂತು ತನ್ನಲ್ಲೇ ಎನ್ನುವಂತೆ ಯಾರಪ್ಪ ಈ ರೂಪಸಿಯ ಮನವನ್ನು ಕದ್ದವ ಎಂದು ಗೊಣಗಿಕೊಳ್ಳುತ್ತಿರುವಾಗಲೇ ತನ್ನ ಹತ್ತಿರ ನಿಂತು ದೇವರನ್ನು ಪ್ರಾರ್ಥಿಸುತ್ತಾ ಕೈ ಮುಗಿದು ಕಣ್ಣು ಮುಚ್ಚಿ ನಿಂತ ತರುಣನನ್ನು ಕಂಡು ಆತ ಒಂದು ಕ್ಷಣ ಮೋಡಿಗೊಳಗಾದವನಂತೆ ನಿಂತ ಅವನ ಮನ ಈ ತರುಣನನ್ನು ಕಂಡರೆ ಬಹುಶಃ ಶಾರ್ವರಿ ಮೆಚ್ಚ ಬಹುದು ಎಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಾರ್ವರಿ ದೇವರಿಗೆ ಕೈ ಮುಗಿದು ನಿಂತ ಸಜನ್ ಹಾಗೂ ಅವನನ್ನೇ ನೋಡುತ್ತಾ ನಿಂತ ಮಧುವನ್ನು ಒಂದು ಕ್ಷಣ ದಿಟ್ಟಿಸಿ ನೋಡಿ ತನ್ನಲ್ಲೇ ನಗುತ್ತಾ ದೇವರಿಗೆ ನಮಸ್ಕರಿಸಿ ಆಗತಾನೇ ಸಜನ್ ನನ್ನು ಕಂಡಂತೆ ಹಾಯ್ ಸಜನ್ ಇದೇನು ಅಪರೂಪಕ್ಕೆ ದೇವಸ್ಥಾನಕ್ಕೆ ಬಂದಂತಿದೆ ಯಾವಾಗದಿಂದ ನಿನಗೆ ದೇವರಲ್ಲಿ ಭಕ್ತಿ ಬಂದಿದ್ದು ನೀನು ಇಲ್ಲಿದ್ದಿಯಾ ಯಾಕೆ ನನಗೆ ಫೋನ್ ಮಾಡಲಿಲ್ಲ ಎನ್ನುವಳು .
ಒಹೋ ಇವರಿಬ್ಬರಿಗೆ ಮೊದಲೇ ಪರಿಚಯವಿದೆ ಇವಳ ಸ್ನೇಹಿತ ಅವನೇ ಇರಬಹುದೇನೋ ಎಂದು ಮದು ಯೋಚಿಸುತ್ತಾ ಶಾರ್ವರಿಯನ್ನು ಕಂಡರೂ ಕಾಣದಂತೆ ಅಲ್ಲಿಂದ ಸರಿದು ಹೋದರೂ ಕಿವಿ ಮಾತ್ರ ಅವರಿಬ್ಬರ ಸಂಭಾಷಣೆಯನ್ನು ಆಲಿಸುವುದರಲ್ಲಿ ನಿರತವಾಗಿತ್ತು
ಶಾರ್ವರಿಯನ್ನು ಕಂಡ ಸಜನ್ ಹಾಯ್ ಶಾರ್ವಿ ನೀನು ದೇವಸ್ಥಾನದ ಒಳಗೆ ಹೋಗುವುದು ಕಂಡು ಹೇಗೂ ನೀನು ಇಲ್ಲಿ ಸಿಕ್ಕೆ ಸಿಗುತ್ತಿಯಾ ಎಂದು ತಿಳಿದು ಫೋನ್ ಮಾಡಿಲ್ಲ ಕಣೆ .ಅಂದ ಹಾಗೆ ನಿನ್ನ ಹುಟ್ಟುಹಬ್ಬಕ್ಕೆ ಇದು ನನ್ನ ಕಿರು ಕಾಣಿಕೆ ಹ್ಯಾಪಿ ಹುಟ್ಟುಹಬ್ಬ ಎಂದೆಂದಿಗೂ ಚೆನ್ನಾಗಿರು ಎಂದು ಹಾರೈಸಿ ತಾನು ತಂದ ಕಾಣಿಕೆಯನ್ನು ಅವಳ ಕೈಯಲ್ಲಿಡುವನು .
ತನಗೆ ಮನೆಯಲ್ಲಿ ಮದುವೆಯ ತಯಾರಿ ನಡೆಸುತ್ತಿರುವ ಬಗ್ಗೆ ಶಾರ್ವರಿ ಅವನಲ್ಲಿ ಹೇಳುತ್ತಾ ಆದಷ್ಟು ಬೇಗ ನೀನು ನನ್ನ ತಂದೆ ತಾಯಿಯರನ್ನು ಭೇಟಿಯಾಗಿ ವಿಷಯ ತಿಳಿಸು ಎಂದು ಹೇಳಿದಾಗ ಅವನು ನೋಡು ಶಾರ್ವೀ ನಮ್ಮಿಬ್ಬರದು ಜಾತಿ ಬೇರೆಯಾದ್ದರಿಂದ ನಮ್ಮ ತಂದೆ ತಾಯಿ ನಮ್ಮ ಮದುವೆಗೆ ಒಪ್ಪುವುದು ಸಂಶಯ ಆದ್ದರಿಂದ ನಾವು ಯಾರಿಗೂ ತಿಳಿಸದೆ ದೂರ ಹೋಗಿ ಮದುವೆಯಾಗೋಣ ಎನ್ನುವನು.ಶಾರ್ವರಿಗೂ ಅದೆ ಸರಿ ಎನಿಸಿದ್ದರಿಂದ ಆಕೆ ಆಗಲಿ ಸಜ್ಜು ಯಾವಾಗ ಹೋಗೋಣ ಎಂದು ಕೇಳುವಳು..ಸಜನ್ ನೋಡು ಶಾರ್ವಿ ನನಗೂ ನಿನ್ನನ್ನು ಆದಷ್ಟು ಬೇಗ ಮದುವೆಯಾಗುವ ಇಷ್ಟವಿದೆ ಹಾಗಾಗಿ ನಾಳೆಯೇ ನೀನು ಸಾಯಂಕಾಲ 6ಗಂಟೆಗೆ ಇಲ್ಲಿಗೆ ಬಂದು ಬಿಡು ನಾವು ನಾಳೆ ರಾತ್ರಿ ಬಸ್ಗೆ ಹೊರಟು ಹೋಗೋಣ ಎನ್ನುವನು. ಶಾರ್ವರಿ ಒಪ್ಪಿ ಮನೆಕಡೆ ಹೋಗುವನಿತರಲ್ಲೇ ಅಲ್ಲಿಗೆ ಬಂದ ಹುಡುಗಿಯನ್ನು ಕಂಡು ಮಧುವಿಗೆ ಆಶ್ಚರ್ಯವಾಗುತ್ತದೆ .ಯಾಕೆಂದರೆ ಆ ಹುಡುಗಿಯನ್ನು ತಾನು ನಿತ್ಯವೂ ಹೋಗುವ ಬಸ್ಸಿನಲ್ಲಿ ಎಷ್ಟೋ ಬಾರಿ ನೋಡಿದ್ದ. ಈಗ ಅವಳು ಅವನ ಜತೆ ಇರುವುದು ನೋಡಿ ಕುತೂಹಲ ಗೊಂಡ ಅವನು ಶಾರ್ವರಿಗೆ ಕಾಲ್ ಮಾಡಿ ಕೂಡಲೇ ದೇವಸ್ಥಾನಕ್ಕೆ ಬರುವಂತೆ ಹೇಳಿ ನಿನಗೊಂದು ಸರ್ಪ್ರೈಸ್ ಇದೆ ಬೇಗ ಬಾ ಎಂದು ಹೇಳಿ ಆ ಜೋಡಿಗಳ ಸಂಭಾಷಣೆಗೆ ಕಿವಿ ಕೊಡುವನು ಅವರಿಬ್ಬರೂ ಮಾತಾಡುತ್ತಿರುವಾಗಲೇ ಶಾರ್ವರಿ ಅವಸರದಿಂದ ಬರುವುದು ಕಂಡು ಅವಳನ್ನು ಅಲ್ಲೇ ತಡೆದು ತನ್ನೊಡನೆ ಕರೆದೊಯ್ದ ಮಧು ಆ ಜೋಡಿಯರ ಮಾತು ಕೇಳಿಸುವಷ್ಟು ದೂರದಲ್ಲಿ ನಿಂತು ಮೌನವಾಗಿ ಸಂಜ್ಞೆ ಮಾಡುವನು .ಶಾರ್ವರಿ ಕುತೂಹಲದಿಂದ ಅವರಿಬ್ಬರ ಸಂಭಾಷಣೆಯನ್ನು ಆಲಿಸುತ್ತಾ ಇದ್ದಾಗ ತನ್ನ ಹೆಸರನ್ನು ಕೇಳಿ ಇನ್ನಷ್ಟು ಕುತೂಹಲ ಗೊಂಡು ಮುಂದಕ್ಕೆ ಹೋಗಬೇಕೆಂದಿದ್ದಾಗ ಮಧು ಅವಳ ಕೈಯನ್ನು ಹಿಡಿದು ತಡೆಯುವನು.
ಅವರಿಬ್ಬರೂ ಇಹದ ಪರಿವೆ ಇಲ್ಲದಂತೆ ಮಾತನಾಡುತ್ತಾ ಒಬ್ಬರನ್ನೊಬ್ಬರು ಬಲವಾಗಿ ತಬ್ಬಿಕೊಂಡುದನ್ನು ಕಂಡ ಶಾರ್ವರಿಯ ಮುಖ ನಾಚಿಗೆಯಿಂದ ಕೆಂಪಾಗುತ್ತದೆ ಆದರೆ ಅವರ ಮಾತು ಕೇಳಿದಾಗ ಅವಳ ಮುಖ ಸಿಟ್ಟಿನಿಂದ ಕೆಂಪಾಗಿ ಮುಷ್ಟಿ ಬಿಗಿಯಾಗುವುದು. ಆ ಕ್ಷಣ ಅವರ ಮುಖವನ್ನು ನೋಡಬೇಕು ಎನ್ನುವ ಕುತೂಹಲ ಉಂಟಾದರೂ ಮಧು ಅವಳನ್ನು ಮುಂದೆ ಹೋಗಲು ಬಿಡುವುದಿಲ್ಲ ಅವರು ನೋಡುತ್ತಿರುವಂತೆಯೇ ಈ ಕಡೆ ತಿರುಗಿದ ಗಂಡಸನ್ನು ಕಂಡು ಶಾರ್ವರಿ ಬೆಚ್ಚಿ ಬೀಳುವಳು
ಮಧು ಅವಳನ್ನು ಸಮಾಧಾನಿಸುತ್ತಾ ನೋಡು ಶಾರ್ವರಿ ಕಣ್ಣಾರೆ ಕಂಡೆಯಲ್ಲ ಅವರ ಮಾತು ಕೇಳಿದಾಗ ನಿನಗೇನನಿಸಿತು ಎಂದು ಕೇಳುವನು ಶಾರ್ವರಿ ಒಂದು ಕ್ಷಣ ಮೌನವಾಗಿದ್ದು .ಭಾವ ದೇವರು ದೊಡ್ಡವ ಅನಾಹುತವಾಗುವ ಮೊದಲೇ ನಿನ್ನ ಮುಖಾಂತರ ನನಗೆ ಸತ್ಯದರ್ಶನವಾಗುವಂತೆ ಮಾಡಿದ್ದಾನೆ .ಆದರೆ ಅವನನ್ನು ಸುಮ್ಮನೆ ಬಿಡಬಾರದು ಇನ್ನು ಎಷ್ಟು ಜನ ಹೆಣ್ಣು ಮಕ್ಕಳನ್ನು ಈತ ಈ ರೀತಿ ವಂಚಿಸುತ್ತಿದ್ದಾನೋ ಎನ್ನುವಳು
ಮಧು ತನ್ನ ಸ್ನೇಹಿತ ಪೊಲೀಸ್ ಆಫೀಸರ್ ಪ್ರಶಾಂತನ ಸಹಾಯವನ್ನು ನಾವು ಪಡೆಯುವ ಎಂದು ಹೇಳಿ ಅವಳನ್ನು ಪ್ರಶಾಂತನ ಮನೆಗೆ ಕರೆದೊಯ್ಯುವನು .ಅಲ್ಲಿ ವಿಷಯ ತಿಳಿದ ಪ್ರಶಾಂತ ಆ ಹುಡುಗನ ಫೋಟೋ ನೋಡಿ ದಂಗು ಬಡಿಯುವನು . ಎಷ್ಟೋ ಸಮಯದಿಂದ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ ಖುಷಿಯಾದ ಅವನು ಆ ಹುಡುಗನ ಬಗ್ಗೆ ಎಲ್ಲವನ್ನೂ ಹೇಳಿ ನಾಳೆ ಅವನನ್ನು ಸಾಕ್ಷಿ ಸಮೇತ ಹಿಡಿಯುವ ನೀನು ಅವನು ಹೇಳಿದ ಸಮಯಕ್ಕೆ ಸರಿಯಾಗಿ ದೇವಸ್ಥಾನಕ್ಕೆ ಬಾ ಎನ್ನುವನು
ಮರುದಿನ 6ಗಂಟೆಗೆ ಬಂದ ಶಾರ್ವರಿಯನ್ನು ಪ್ರೀತಿಯಿಂದ ಕೈ ಹಿಡಿದುಕೊಂಡ ಆ ತರುಣ ಎಲ್ಲಿ ನಿನ್ನ ಲಗ್ಗೇಜ್ ಬಾ ಶಾರ್ವಿ ನಾವು ಹೊರಡೋಣ ಎಂದು ಹೇಳಿ ಅವಳನ್ನು ಅಲ್ಲೇ ಹತ್ತಿರದ ಬಸ್ ಸ್ಟ್ಯಾಂಡ್ ಗೆ ಕರೆದೊಯ್ಯುವನು . ಶಾರ್ವರಿಗೆ ಭಯವಾದರೂ ತನ್ನ ಹಿಂದೆಯೇ ಬರುತ್ತಿರುವ ಮಧು ಮತ್ತು ಪ್ರಶಾಂತನನ್ನು ಕಂಡು ದೈರ್ಯವಾಗಿ ಅವನೊಡನೆ ಹೆಜ್ಜೆ ಹಾಕುವಳು ಅವಳ ಲಗ್ಗೇಜ್ ಬಗ್ಗೆ ಪುನಃ ಕೇಳಿದಾಗ ಅವಸರದಲ್ಲಿ ತರಲು ಬಿಟ್ಟು ಹೋಯಿತು ಎಂದು ಹೇಳಿದ ಅವಳ ಬಗ್ಗೆ ಕೋಪಗೊಂಡ ಅವನು ಒಂದು ಕ್ಷಣ ವಿವೇಕ ಕಳೆದು ಕೊಂಡರೂ ಮರುಕ್ಷಣ ಸುಮ್ಮನಾಗಿ ಇರಲಿ ನಿನಗೆ ಊರಿಗೆ ಹೋದ ಮೇಲೆ ಬೇಕಾದ ಡ್ರೆಸ್ ತೆಗೆದುಕೊಳ್ಳುವ ಎಂದು ಹೇಳುವನು ಅಷ್ಟರಲ್ಲಿ ಬಸ್ ಸ್ಟ್ಯಾಂಡ್ ಬರಲು ಅಲ್ಲಿ ಇದ್ದ ತರುಣಿಯನ್ನು ತನ್ನ ತಂಗಿ ಎಂದು ಅವಳಿಗೆ ಪರಿಚಯಿಸಿದ ಅವನು ಅವರಿಬ್ಬರ ಜತೆ ಬಸ್ ಹತ್ತಬೇಕೆಂದಿದ್ದಾಗ ಕೂಡಲೇ ಮಧು ಹಾಗು ಪ್ರಶಾಂತ ಅವನನ್ನು ಹಿಡಿದುಕೊಂಡು ಎಳೆದೊಯ್ಯುವರು.ಅವನು ಪ್ರತಿಭಟಿಸುವುದು ಕಂಡು ಅವನ ಕೈಗೆ ಕೋಳ ಹಾಕಿ ಅವನ ಜತೆಯಿದ್ದ ಹುಡುಗಿಯನ್ನು ತಮ್ಮೊಡನೆ ಕರೆದೊಯ್ಯುವರು .ಹೆದರಿ ಗುಬ್ಬಚ್ಚಿಯಂತಾದ ಹುಡುಗಿ ಅಳುವುದು ಕಂಡು ಗದರಿದ ಪ್ರಶಾಂತ ಅವಳ ಮನೆಯ ವಿಳಾಸ ಮತ್ತು ಫೋನ್ ನಂಬರ್ ತೆಗೆದುಕೊಂಡು ಅವಳ ತಂದೆ ತಾಯಿಯರನ್ನು ಸ್ಟೇಷನ್ ಗೆ ಬರಲು ಹೇಳುವನು.
ಸಜನ್ ಎಂದು ಹೆಸರಿಟ್ಟ ಆತನ ನಿಜವಾದ ಹೆಸರು ಬೇರೆಯೇ ಆಗಿತ್ತು . ಅವನನ್ನು ಲಾಕಪ್ಪಿಗೆ ಹಾಕಿದ ಪ್ರಶಾಂತ ಅವನ ಜತೆ ಇದ್ದ ಹುಡುಗಿಯ ತಂದೆ ಬರುತ್ತಲೇ ಅವರಿಗೆ ವಿಷಯ ತಿಳಿಸಿ ಹುಡುಗಿಗೂ ಬುದ್ಧಿ ಹೇಳಿ ಮುಂದೆ .ಈ ರೀತಿ ಮಾಡದೆ ತಂದೆ ತಾಯಿಯರು ಒಪ್ಪಿದ ಹುಡುಗನನ್ನು ಮದುವೆ ಆಗುವೆ ಎಂದು ಮುಚ್ಚಳಿಕೆ ಪಡೆದುಕೊಂಡು ಬಿಟ್ಟು ಬಿಡುವನು
ಇತ್ತ ಶಾರ್ವರಿ ಪಶ್ಚಾತ್ತಾಪದಿಂದ ಮಧುವಿಗೆ ಮುಖ ತೋರಿಸಲು ಆಗದೆ ತಲೆ ಕೆಳಗೆ ಹಾಕಿ ಅವನೊಡನೆ ಮನೆಗೆ ಬಂದವಳೇ ರೂಮಿಗೆ ಹೋಗಿ ಕದವಿಕ್ಕುವಳು . ಅವಳೇನಾದರೂ ಮಾಡಿಕೊಂಡಾಳೆಂದು ಹೆದರಿದ ಮಧು ಅವಳ ರೂಮಿನ ಹತ್ತಿರ ಹೋಗಿ ಬಾಗಿಲು ಬಡಿದಾಗ ಹೆದರಬೇಡಿ ಬಾವ ಆ ಆಯೋಗ್ಯನಿಗಾಗಿ ನಾನು ಜೀವ ಕಳೆದು ಕೊಳ್ಳಲಾರೆ .ನಾನು ನಾಳೆಯೇ ನನ್ನ ಗೆಳತಿಯ ಮನೆಗೆ ಹೋಗುತ್ತೇನೆ.ಇಷ್ಟೆಲ್ಲಾ ಆದಮೇಲೆ ನಮ್ಮ ಮದುವೆಯ ಮಾತುಕತೆ ಮುರಿದು ಬಿದ್ದಂತೆ ಎಂದು ತಿಳಿಯುವೆ ಎನ್ನುವಳು.
ಮಧು ಏನೋ ಹೇಳ ಬೇಕೆಂದಿದ್ದರೂ ಏನೂ ಹೇಳದೆ ಅಲ್ಲಿಂದ ಸರಿದು ಹೋಗಿ ಅತ್ತೆ ಮಾವನವರಲ್ಲಿ ನನಗೆ ತುರ್ತಾಗಿ ದೆಹಲಿಗೆ ತಿಂಗಳ ಮಟ್ಟಿಗೆ ಹೋಗಲ್ಲಿಕ್ಕಿರುವುದರಿಂದ ಮದುವೆಯ ಮಾತುಕತೆಯನ್ನು ಸ್ವಲ್ಪ ದಿವಸ ಮುಂದೂಡೋಣ ಎನ್ನುವನು. ಶಾರ್ವರಿಯ ತಂದೆ ತಾಯಿಗೆ ಮಗಳ. ಮದುವೆಯನ್ನು ಆದಷ್ಟು ಬೇಗ ಮಾಡುವ ಅಭಿಪ್ರಾಯ ವಿರುವುದರಿಂದ ನಾವು ದಿನ ನಿಶ್ಚಯ ಮಾಡುವ ನೀನು ಬಂದ ಮೇಲೆಯೇ ಮುಹೂರ್ತವಿಡೋಣ ಎನ್ನುವರು. ಮಧು ಯಾವುದಕ್ಕೂ ಶಾರ್ವರಿಯನ್ನು ವಿಚಾರಿಸಿ ಎಂದು ಹೇಳಿ ಜಾರಿಕೊಳ್ಳುವನು.
ಶಾರ್ವರಿಯ ಹಾಗೂ ತನ್ನ ಮನಸ್ಸು ತಹ ಬಂದಿಗೆ ಬರಲು *ಈ ವಿಯೋಗ ಅನಿವಾರ್ಯವಾಗಿತ್ತು* ಎಂದು ಯೋಚಿಸಿದ ಮಧು ಶಾರ್ವರಿಗೆ ವಿಷಯ ತಿಳಿಸಿ ನಾನು ಬರುವಾಗ ನಿನ್ನ ಮನಸು ನಿರ್ಮಲವಾಗಿದ್ದರೆ ನಾನು ನಿನ್ನನ್ನು ಸ್ವೀಕರಿಸುವೆ ಎಂದು ಹೇಳಿ ಹೊರಡುವನು.
ಇತ್ತ ಶಾರ್ವರಿ ತನ್ನ ಗೆಳತಿಯ ಮನೆಗೆ ಹೋಗಿ ಎಲ್ಲವನ್ನೂ ಅವಳೊಡನೆ ಹೇಳುತ್ತ ಬಿಕ್ಕಿ ಬಿಕ್ಕಿ ಆಳುವಳು ಮಾಣಿಕ್ಯ ವನ್ನು ಬಿಸುಟು ಗಾಜಿನ ಮಣಿ ಗಾಗಿ ಆಳುವ ನಿನ್ನನ್ನು ಕಂಡು ನನಗೆ ಕನಿಕರವಾಗುತ್ತಿದೆ ಎಂದು ಗೆಳತಿ ಹೇಳಿದ್ದು ಕೇಳಿ . ಶಾರ್ವರಿ ನಾನು ಆ ಗಾಜಿನ ಮಣಿಗಾಗಿ ಅಳುತ್ತಿಲ್ಲ ವಜ್ರದ ಬೆಲೆ ತಿಳಿಯಲಾರದ ದಡ್ಡಿ ನಾನಾದೆನಲ್ಲ ಎಂದು ಅಳು ಬಂತು ಎನ್ನುವಳು . ಹರೆಯದ ಹೆಣ್ಣು ಮಕ್ಕಳು ತಿಳಿದೋ ತಿಳಿಯದೆಯೋ ಈ ರೀತಿ ಗುರುತು ಪರಿಚಯವಿಲ್ಲದ ಹುಡುಗರ ಮೋಹಕ ಮಾತನ ಜಾಲದಲ್ಲಿ ಬಿದ್ದು ಜೀವನ ಹಾಳು ಮಾಡಿಕೊಳ್ಳದೆ ವಿದ್ಯೆ ಕಲಿಯುವ ಸಮಯದಲ್ಲಿ ವಿದ್ಯೆ ಕಲಿತು ತಮ್ಮ ಕಾಲ ಮೇಲೆ ನಿಲ್ಲುವಂತಾಗಬೇಕು ತಂದೆ ತಾಯಿಯರು ತಮ್ಮ ಮೇಲಿಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಹರೆಯದಲ್ಲಿ ತಪ್ಪು ಸರಿ ವಿವೇಚನೆ ಇರಬೇಕು ಇಲ್ಲವಾದರೆ ತಮ್ಮ ಸುತ್ತ ತಾವೇ ಮುಳ್ಳಿನ ಹಾಸಿಗೆಯನ್ನು ಕಟ್ಟಿಕೊಂಡಂತಾದೀತು ಸದ್ಯ ದೇವರು ನಿನ್ನನ್ನು ರಕ್ಷಿಸಿದ್ದಾನೆ ಎಲ್ಲಾ ಮರೆತು ಖುಷಿಯಾಗಿರು ಎಂದು ಅವಳನ್ನು ಸಮಾಧಾನಿಸಿ ಗೆಳತಿ ಅವಳಿಗೆ ಹೊತ್ತು ಕಳೆಯಲು ಅರ್ಧಕ್ಕೆ ನಿಂತ ಅವಳ ಸಂಗೀತವನ್ನು ಮುಂದುವರೆಸಲು ಸಲಹೆ ಕೊಡುವಳು .ಅದರಂತೆ ಎಲ್ಲವನ್ನೂ ಮರೆತು ಸಂಗೀತ ಕಲಿಯುವುದರಲ್ಲಿ ತಲ್ಲೀನಳಾದ ಶಾರ್ವರಿ ಮಧುವಿನ ಆಗಮನಕ್ಕಾಗಿ ತುದಿಗಾಲಿನಲ್ಲಿ ನಿಲ್ಲುವಳು.
ಪಂಕಜಾ. ಕೆ.ರಾಮಭಟ್
Comments
Post a Comment