Skip to main content

Posts

ಕಾರ್ಮಿಕರ ಕಷ್ಟ

ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತು ವಾರದ ಚಟುವಟಿಕೆಗಾಗಿ  ವಿಷಯ ಮೇ 1  ವಿಶ್ವ ಕಾರ್ಮಿಕರ  ದಿನಾಚರಣೆ ಪ್ರಯುಕ್ತ ಕವನ      ಕಾರ್ಮಿಕರ ಕಷ್ಟ ಹಗಲಿರುಳೆನ್ನದೆ ಕಸವನು ಗುಡಿಸುತ ಬೆಳಗಿನ ಜಾವವೆ  ನಡೆವನು ಕಾರ್ಮಿಕ ಮಳೆ ಚಳಿ ಬಿಸಿಲನು ಲೆಕ್ಕಕೆ ತಾರದೆ ಕೆಲಸವ ಮಾಡುತಲಿ ಕಳೆವನು  ತನ್ನಯ ದಿನಗಳ ದೂಳಲಿ  ತೊಳೆಯುತ ಕೆಸರನು ನಗುಮುಖದಿಂದಲಿ ಬಳಿವನು ತನ್ನಯ ಬಾಳಿಗೆ ಬಣ್ಣವ   ಕಾಯಕ ಮಾಡುತಲಿ ಜಡಿಮಳೆ ಯಲ್ಲಿಯು ಬೆಚ್ಚದೆ ಬೆದರದೆ ಬಿಡದೆಯೆ ಯೆಲ್ಲೆಡೆ ಹರಡಿದ ಕಸವನು ಹೊಡೆಯುತ  ರೋಗವು ಬಾರದ ತೆರದಲಿ ಸ್ವಚ್ಚತೆ ಮಾಡುವನು ಎಲ್ಲೆಡೆ ಕಸವನು ಬಿಸುಡುವ  ಮನುಜನೆ ದುಡಿಯುವ   ಜನರಿಗೆ ಹೊಟ್ಟೆಗೆ ಹೊಡೆಯದೆ ಕೊಡುತಿರಿಯವನಾ ಕೆಲಸಕೆ ಫಲವನು ತಿಳಿಯುತ  ಕಷ್ಟವನು ಪಂಕಜಾ ಕೆ.ರಾಮಭಟ್
Recent posts

ಸಾರ್ಥಕ ಬದುಕು

ಸಾರ್ಥಕ ಬದುಕು  ಘಮವ ಬೀರುತ ಅರಳಿ ಬಿಟ್ಟಿದೆ ಹೊನ್ನ ಬಣ್ಣದ ಹೂಗಳು ಸುಮದ  ಮಧುವನು ಹೀರಲೆಂದು   ಮುತ್ತಿ ಬರುತಿವೆ   ದುಂಬಿಗಳು ದೊಡ್ಡ ಗಾತ್ರದ  ಭೃಂಗ ಕುಳಿತಿದೆ  ಸಣ್ಣ ಹೂವಿನ ಮಧ್ಯದಿ ಪರಾಗ ಸ್ಪರ್ಶಕೆ ದಾರಿಯಾಗಿದೆ ಭೃಂಗಗಳ ಒಡನಾಟದಿ  ಕಣ್ಣು ತುಂಬುವ ಚೆಲುವ ಹೂವದು ದುಂಬಿಯಾಟಕೆ ಬಳಲಿದೆ ಮಧುವ ಸುರಿಸುತ ನಗುತ ನಲಿಯುತ ಒಂದೇ ದಿನದಲಿ ಬಾಡಿದೆ  ಒಂದೇ ದಿನದ ಬದುಕಿದರದಾದರೂ ಜೀವ ಸಾರ್ಥಕ ಪಡೆದಿದೆ ದೇವ ಪಾದದಿ  ಹೆಣ್ಣ ಮುಡಿಯಲಿ ನಕ್ಕು ಕಂಗಳ ಸೆಳೆದಿದೆ ಪಂಕಜಾ. ಕೆ.ರಾಮಭಟ್.

ಶೂರ್ಪನಖಿ ಕಾಟ

*ಶೂರ್ಪನಖಿಯ ಕಾಟ* ಪದ್ಮಮುಖಿ (ಅಂಬಿನಿ) ವೃತ್ತ ನಾಟಕವಾಡುತ  ರಾವಣನಾನುಜೆ ಬಂದಿಹಳೈ ಕೂಟಕೆ ಬಾರೆಲೆಯೆನ್ನುತ ರಾಮನ ಕಾಡಿದಳೈ ಮಾಟವ ಮಾಡುತ ಕಣ್ಣಲೆ ಬಾಣವ ಹೂಡಿ ದಳೈ ಕಾಟವ ತಾಳದೆ  ರಾಮನು ದೂರಕೆ ನೂಕಿದನೈ  ಕೋಪದಿ ಲಕ್ಷ್ಮಣನಾಕೆಯ ಮೂಗನು  ಕೊಯ್ದಿಹನೈ ತಾಪವ ತಾಳದೆ ರಕ್ಕಸಿ ಕೂಗುತಲೋಡಿದಳೈ ಶಾಪಕೆ. ಹುಟ್ಟಿದ ರಕ್ಕಸ  ವೇಷವ ಹಾಕಿದನೈ ರೂಪಸಿ ಸೀತೆಗೆ  ಮೋಡಿಯ ಮಾಡಲು ಬಂದಿಹನೈ  ಚಿನ್ನದ ಜಿಂಕೆಯು ಸೀತೆಯ  ಕಣ್ಣಿಗೆ ಬಿದ್ದಿಹುದೈ ತಣ್ಣನೆಯಾಕೆಗೆ ಮೋಹಕ ಮೋಡಿಯ   ಹಾಕಿಹುದೈ   ಕಣ್ಣಿಗೆ ಕಟ್ಟುವ ಸುಂದರ ರೂಪದ ಜಿಂಕೆಯದೈ  ಮುನ್ನವೆ ಬೇಕೆನಗೆನ್ನುತ ರಾಮನ ಕಾಡಿದಳೈ ಪಂಕಜಾ. ಕೆ ರಾಮಭಟ್

ಅರಿವು ಮೂಡಿದಾಗ ಕಥೆ

ಅರಿವು ಮೂಡಿದಾಗ   ಶ್ರೀಮಂತನಾದ ರಮೇಶನಿಗೆ ತಂದೆ ಕೇಳಿ ಕೇಳಿದಾಗಳೆಲ್ಲಾ  ಹಣ ಕೊಡುತ್ತಿದ್ದುದರಿಂದ  , ಹಣದ ಬೆಲೆ ತಿಳಿದಿರಲಿಲ್ಲ .  ಕಾಲೇಜಿಗೆ ನೆಪ ಮಾತ್ರಕ್ಕೆ ಹೋಗುತ್ತಾ ಗೆಳೆಯರ ಜತೆ  ಅಲ್ಲಿ ಇಲ್ಲಿ ತಿರುಗಾಡಿ ಮಜಾ ಮಾಡುವುದೇ ಅವನ ಕಾಯಕವಾಗಿತ್ತು. ಬಡವರೆಂದರೆ  ತಾತ್ಸಾರ ಮನೊಭಾವ ಹೊಂದಿದ್ದ ಆತ,  ಹರಿದ ಬಟ್ಟೆ ಹಾಕಿದ  ಬಡವರನ್ನು ಕಂಡರೆ ದೂರ ಸರಿಯುತ್ತಿದ್ದ.                 ಒಂದು ದಿನ ಸ್ನೇಹಿತರೆಲ್ಲ ಸೇರಿ ಜಾಲಿ ರೈಡ್ ಹೋಗುವುದೆಂದು ನಿರ್ಣಯಿಸಿದರು. ನಿಶ್ಚಿತ  ಸ್ಥಳಕ್ಕೆ ಯಾರು ಮೊದಲು ತಲುಪುತ್ತಾರೋ. ಅವರಿಗೆ 10000  ಬಹುಮಾನ ಎಂದು ಘೋಷಿಸಿದ ರಮೇಶ, ತಾನು ಅವರ   ಜತೆ  ತನ್ನ ಬೈಕಿನಲ್ಲಿ ಹೊರಡುವ ನಿರ್ಧಾರ ಮಾಡಿದ.  ಎಲ್ಲರೂ ಒಂದೊಂದು ದಾರಿ ಹಿಡಿದು ತಮ್ಮತಮ್ಮ ಬೈಕ್ ಚಲಾಯಿಸಿದರು. ರಮೇಶನೂ ವೇಗವಾಗಿ ಬೈಕ್ ಓಡಿಸುತ್ತಾ ಇರುವಾಗ ತಿರುವಿನಲ್ಲಿ ಆಯ ತಪ್ಪಿ ಕೆಳಗಿನ ಪ್ರಪಾತಕ್ಕೆ ಬೈಕ್ ಸಮೇತ ಉರುಳಿ ಬಿಟ್ಟ .              ಕಣ್ಣು ಬಿಟ್ಟಾಗ ತಾನೊಂದು ಹುಲ್ಲಿನ ಗುಡಿಸಿಲಿನಲ್ಲಿ ಇರುವುದು ತಿಳಿದು ಆತ ಮೆಲ್ಲಗೆ ಏಳಲು ಪ್ರಯತ್ನಿಸಿದಾಗ , ಮೈ ಕೈಯೆಲ್ಲ ನೋವಾಗಿ ಸಣ್ಣಗೆ ನರಳಿದ  .ಅಷ್ಟರಲ್ಲಿ ಅಲ್ಲಿಗೆ ಬಂದ ಕೆದರಿದ ಕೂದಲ ಹರಿದ ಬಟ್ಟೆ ತೊಟ್...

ಮಧುಮಾಸ

  ಮಧು ಮಾಸ ಕತ್ತನೆತ್ತಲು ಸುತ್ತು ಮುತ್ತಲು ಹಸಿರು ಹಂದರ ಹಾಸಿದೆ  ಚಿತ್ತವನ್ನು ಸೆಳೆದು ಬಿಡುತಲಿ ಬೇವು ಮಾವು ಚಿಗುರಿದೆ ನೆತ್ತಿ ಸುಡುವ ಬಿಸಿಲ ಝಳದಲೂ  ತಂಪು ಗಾಳಿಯ ಬೀಸಿದೆ ಕತ್ತಿ ಮಸೆಯದೇ   ವಸುಧೆಯೊಡಲನು ಉಳಿಸಿ ಬೆಳೆಸಬೇಕಿದೆ ಮಾಮರದಲಿ ಕುಳಿತು  ಕೋಗಿಲೆ ಮಧುರ ಗಾನವ ಹಾಡಿದೆ ಚಾಮರವ ಬೀಸುತಲಿ ತರುಲತೆಗಳು ನಲಿದಿವೆ ಭೂಮಿ ತಾಯಿಯ  ಮಡಿಲಿನಲ್ಲಿ  ನವೋಲ್ಲಾಸ ಮೂಡಿದೆ  ಬಾನಿನೆತ್ತರ ಬೆಳೆದ  ಮರಗಳು ಫಲವ ತುಂಬಿ ಬಾಗಿದೆ ವಸಂತ ಋತುವಿನ ಸೊಬಗ ಕಾಣಲು ಎರಡು ಕಣ್ಣು ಸಾಲದು ಹೊಸತು ಭಾವವ ಮನದಿ  ತುಂಬಿದೆ ಹೂವು ಹಣ್ಣುಗಳ ಸಾಲದು    ಹಸಿರು ಚಿಗುರಿದ ಗಿಡಮರಗಳು ತಲೆಯ ತೂಗುವ   ಪರಿಯಲಿ ರಸಿಕ  ಮನಗಳು ನಲಿಯುತಿದೆ ಹಸಿರು ತುಂಬಿದ ಧರೆಯಲಿ  ಪಂಕಜಾ. ಕೆ.ರಾಮಭಟ್  

ರಾಮಕಥೆ ಭಾಗ 4

ರಾಮಕಥೆ  4  ರಾಮನ ಜನನ  ಭಾಮಿನಿ ಷಟ್ಪದಿಯಲ್ಲಿ  ಪಂಕಜಾ ಕೆ ರಾಮಭಟ್ ಯಾಗ ಮಾಡಿದ ಪುಣ್ಯ ಫಲದಲಿ ಬೇಗ ಮೂಡಿತು ಕುಡಿಯು ಗರ್ಭದಿ ಬೀಗಿ ಬಿಟ್ಟನು ರಾಜ ದಶರಥ  ತುಂಬು ಸಂತಸದಿ ಸಾಗಿ ದಿನಗಳು ಕಳೆದು ಬೇಗನೆ ಮಾಗಿ ಶುಭದಿನದಂದು  ರಘುವರ ನೀಗಿ ತಾಯಿಯ ಕಷ್ಟವೆಲ್ಲವ ಧರೆಗೆ ಬಂದಿಹನು ಬಾಲರಾಮನು ಲೀಲೆ ತೋರುತ ಹಾಲು ಕುಡಿಯುತ ಬೆಳೆದು ಬಿಟ್ಟನು ಕಾಲಸರಿಯುತಲಿರಲು ಕಲಿತನು ಸಕಲ  ವಿದ್ಯೆಗಳ ಗೋಳು ಹೇಳುತ ಬಂದ ಮುನಿಗಳು ನಾಳೆ ರಾಮನ ಕಳಿಸಿರೆನ್ನುತ ವೇಳೆ  ಬಂದಿದೆ ರಾಜಪುತ್ರರ ಶಕ್ತಿ ಮೆರೆಯಲಿಕೆ ಅನುಜ  ಲಕ್ಷ್ಮಣನೊಡನೆ  ವನದಲಿ ಮುನಿಗಳೆಲ್ಲರ ಸೇವೆ ಮಾಡುತ ಮನನ ಮಾಡಿದನವರು ಕಲಿಸಿದ ವಿದ್ಯೆ ಬುದ್ದಿಗಳಾ ಹನಿಸಿ ತನ್ನಯ ಬೆವರ ಹನಿಗಳ ಮನೆಯ ತೊರೆದರು ಕ್ಲೇಶ ಪಡದೆಯೆ ಮುನಿವರರಿಗೇ ಕಷ್ಟ ಕೊಡುತಿಹ ರಕ್ಕಸರ ತರಿದು ತಾನು ಮಾಡಿದ ಯಜ್ಞ ಮುಗಿಯಲು ಮೇನೆಯಿಲ್ಲದೆ ನಡೆದು ಬರುತಿರೆ ಕಾನನವು ಕಳೆದಾಗ ಸಿಕ್ಕಿತು ಮಿಥಿಲೆ ಪಟ್ಟಣವು ಮಾನಿನಿಯು ತಾ ಪಡೆದ ಶಾಪದಿ ಧೇನಿಸುತ್ತಲಿ ರಾಮನಾಮವ ಕಾನನದ ಬದಿಯಲ್ಲಿ ಶಿಲೆಯಂತಾಗಿ ಬಿದ್ದಿಹಳು ಪಂಕಜಾ .ಕೆ. ರಾಮಭಟ್

ರಾಮಕಥೆ ಭಾಗ 3

ರಾಮಕಥೆ 3 ಭಾಮಿನಿ ಷಟ್ಪದಿ ಪಂಕಜಾ.ಕೆ. ರಾಮಭಟ್  ತನ್ನ ಮಕ್ಕಳ ತೆರದಿ ಸಾಕಿದ ಚೆನ್ನ ರಾಮನ ಮುದ್ದು ಮಕ್ಕಳು  ಚಿನ್ನ ಪುತ್ತಲಿಯಂತೆ ಹೊಳೆಯುತ ಕಥೆಯನೊರೆಯುವರು ಮುನ್ನ ಮಾಡಿದ ಪುಣ್ಯ ಫಲವಿದು ಕಣ್ಣ  ತುಂಬುವ ಚೆಲುವ ಮೂರುತಿ - -ಯನ್ನು  ಬಣ್ಣಿಸಿ  ಹಾಡಿ ಹೊಗಳುವ ಕಥೆಯ ಕೇಳುವುದು   ದೇಶ  ಕೋಸಲದಲ್ಲಿ ದಶರಥ ತೋಷದಿಂದಲಿ ಮಡದಿಯರೊಡನೆ ಕ್ಲೇಶವಿಲ್ಲದೆ  ರಾಜ್ಯಭಾರವ ಮಾಡುತಿರುತಿದ್ದ ವೇಷ ಹಾಕುವ ಜನರ ಮದ್ಯಧಿ ದೇಶದೆಲ್ಲೆಡೆ  ಕವಿದ ಬೇಸರ ಪಾಶದಂತೆಯೆ ಸೆಳೆದು ಬಿಡುತಲಿ ರಾಜ ಬಳಲಿದನು. ತನಯರಿಲ್ಲದ ಚಿಂತೆ ಕಾಡಲು ಮನನ ಮಾಡುತ  ದೇವ ಚರಣವ ಮುನಿವರೇಣ್ಯರ ಕರೆಸಿ ಕೇಳಿದ ರಾಜ ದಶರಥನು ಮುನಿಗಳುಲಿಯುವ  ಮಾತು ಕೇಳುತ ನೆನೆದು ತನ್ನಯ ತಂದೆ ತಾಯಿಯ ಕನಸು ಕಾಣುತ  ಮಾಡಿ ಬಿಟ್ಟನು ಪುತ್ರ  ಕಾಮೇಷ್ಠಿ ಪಂಕಜಾ.ಕೆ. ರಾಮಭಟ್