Skip to main content

Posts

Showing posts from August, 2025

ಮುರಾರಿ

    ಮುರಾರಿ ಮುರಳಿಯ ನುಡಿಸುವ ಮಾಧವನೆದೆಯಲಿ ತಲೆಯನ್ನಿಟ್ಟಳು  ರಾಧೆ ಕರದಲಿ ತುಳಸಿಯ ಮಾಲೆಯ ಹಿಡಿಯುತ ಉಲಿದಳು ತನ್ನಯ ಬಾಧೆ ಮೋಹನಾಂಗನ ಜೊತೆಯಲಿ ನಲಿಯುವ  ಬಯಕೆಯು ತುಂಬಿತು ಮನದಲ್ಲಿ  ಕೃಷ್ಣನೆದೆಯಲಿ ರಾಧೆಗೆ  ಮೊದಲ ಹಾಜರಿ ಯಮುನಾ ತೀರದ ದಡದಲ್ಲಿ ಜಳಕವನಾಡುವ ಗೋಪಿಕೆಯರನು ಕಾಡಿದ  ಬಾಲ  ಶ್ರೀ ಹರಿಯು ತುಂಟನ ತೆರದಲಿ ವಸ್ತ್ರವ ಅಪಹರಿಸಿ ಮನವನು ಗೆದ್ದನು ನರಹರಿಯು ಅಷ್ಟಮಿಯ ದಿನದಲಿ ಬೆಣ್ಣೆಯ ಮೆಲ್ಲಲು ಓಡಿ ಬರುವನು ಅಚ್ಯುತನು  ಭಕ್ತರ ಕರೆಯನು ಆಲಿಸುತ್ತಲಿ   ನಗುಮೊಗದಿಂದಲಿ ಕೇಶವನು ಕೃಷ್ಣ ನಿನ್ನಯ ಧ್ಯಾನವ ಮಾಡಲು  ಕಷ್ಟವೆಲ್ಲವ ನೀಕಳೆವೆ ನಿಷ್ಠೆಯಿಂದಲಿ ಸೇವೆಯ ಮಾಡಲು ಇಷ್ಟವೆಲ್ಲವ ಕರುಣಿಸುವೆ ಪಂಕಜಾ.ಕೆ.ರಾಮಭಟ್

ರಸಗಂಗೆ

ರಸ ಗಂಗೆ ಬರೆದಿರುವ ಸಾಹಿತ್ಯ ಸೆರೆಹಿಡಿದು ಬಿಡಬೇಕು ತೆರೆಯುತಲಿ ಮಸ್ತಕದ ಪುಟಗಳನ್ನು ಹರಿಯುತಿಹ ರಸಗಂಗೆ  ಕರಗಿಸಲು ಬೇಸರವ ಮರೆಸುತಿದೆ ಮನಸಿನಾ ಚಿಂತೆಯನ್ನು ಕವಿಮನದ ಭಾವನೆಯು ಸವಿಪಾಕದಂತಿರುತ ಸವಿಯಲಿಕೆ  ಬೇಕಿಹುದು  ರಸಿಕಮನವು ಬುವಿಯಲ್ಲಿ ತುಂಬಿರುವ ಸವಿಯಾದ ವಿಷಯಗಳು ನವಿರಾದ   ಮನದಿಂದ  ಹೊಮ್ಮಿರುವವು ಹದವಾಗಿ ಬೆರೆಸುತ್ತ  ಪದಗಳಲಿ  ಹಿಡಿದಿಡಲು ಮಧು  ಹೀರುವಾನಂದ   ಸವಿ ಮನಸಿಗೆ ಎದೆತೆರೆದು  ಹಾಡುತಿರೆ  ಸದೆಬಡಿದು ಬಿಡುತಿಹುದು ಗದೆಯಂತೆ ಕುಳಿತಿರುವ  ಕಡುಚಿಂತೆಯ ಪಂಕಜಾ. ಕೆ.ರಾಮಭಟ್  

ನಮಿಸುವೆ ಗುರುವೇ

ನಮಿಸುವೆ ಗುರುವೇ ಕಷ್ಟ ಕಳೆಯುವ ಗುರುವೇ ನಿನ್ನಯ  ಪಾದ ಕಮಲಕೆ ನಮಿಸುವೆ ಇಷ್ಟ ಮೂರುತಿ ರಾಘವೇಂದ್ರಗೆ ನಿಷ್ಟೆಯಿಂದಲಿ ತಲೆಬಾಗುವೆ ಮುತ್ತಿ  ಬರುತಿಹ ಕಷ್ಟವೆಲ್ಲವ ಸರಿಸಿ ನೆಮ್ಮದಿ ಕರುಣಿಸು ಶಕ್ತಿ ತುಂಬುತ ಮನದ ಬಯಲಿಗೆ ಮುಕ್ತಿ ಮಾರ್ಗವ. ತೋರಿಸು ದೀನನಾಗಿಯೇ ಬೇಡಿಕೊಳ್ಳುವೆ ನಿನ್ನ ಚರಣಕೆ. ನಮಿಸುತ ದೀನನಾಥನೆ ಕರುಣೆ ತೋರಿಸು ಅಭಯ ಹಸ್ತವ ಶಿರದಲಿರಿಸುತ ತುಂಗಾ ತೀರದಿ ನೆಲೆಸಿ ಭಕ್ತರ ಅಭಿೇಷ್ಟಗಳನು ಈಡೇರಿಸುವ ಕಲಿಯುಗದ  ಕಲ್ಪವೃಕ್ಷವಾಗಿಹ  ಶ್ರೀ ರಾಘವೇಂದ್ರರ ನೆನೆಯುವ ಪಂಕಜಾ. ಕೆ.ರಾಮಭಟ್  ಮುಡಿಪು

ಅಣ್ಣತಂಗಿಯ ಬಂಧ

ಅಣ್ಣ ತಂಗಿಯ ಬಂಧ   ಅಣ್ಣನ ಕೈಗಳಿಗೆ. ರಾಖಿಯ ಕಟ್ಟಲು ಕಾಯುತಲಿರುವಳು ತಂಗಿ ಸುಂದರ ಬಣ್ಣದ ರಾಖಿಯ ಕಟ್ಟುತ ನಲಿಯುತಲಿರುವಳು ಹಿಗ್ಗಿ ನಾಡಿನ ಸಂಸ್ಕೃತಿ ಸೌರಭ  ಸಾರುವ ರಕ್ಷಾಬಂಧನದ ಹಬ್ಬವಿದು ಶ್ರಾವಣ ಮಾಸದ ಹುಣ್ಣಿಮೆ ದಿನದಲಿ ಆಚರಿಸುವ ಹಬ್ಬವಿದು ರಾಖಿ ಎನ್ನುವ ಪವಿತ್ರ ದಾರವು  ಬೆಸೆದಿದೆ ಸಹೋದರತೆಯ ಬಂಧವನು ಅಣ್ಣ ತಂಗಿಯರ ಪ್ರೀತಿಯ  ಬಂಧವು ಜನುಮ ಜನುಮದ  ಅನುಬಂಧವನು  ಅಣ್ಣನು ಕೊಡುವನು ರಕ್ಷಣೆ ತಂಗಿಗೆ  ಸಹೋದರಿಯ  ಪ್ರೀತಿಗೆ  ಸೋಲುತಲಿ  ರಕ್ಷಣೆ ಮತ್ತು ಸಂಬಂಧಗಳ  ಬೆಸೆಯುತ  ಭ್ರಾತೃತ್ವದ ಸವಿ ಸವಿಯುತಲಿ   ಜಾತಿ ಧರ್ಮದ ಎಲ್ಲೆಯ ಮೀರುತ ಬೆಸೆಯಲಿ ಸಹೋದರ ಪ್ರೇಮ ಪರಸ್ತ್ರೀಯರಲಿ ತಂಗಿಯ  ಕಾಣುತಾ  ಅಳಿಯಲಿ ಮನಸಿನ ಕಾಮ   ಪಂಕಜಾ.ಕೆ. ಮುಡಿಪು

ರಕ್ಷಾಬಂಧನ

ರಕ್ಷಾ ಬಂಧನ ಹೊಳೆಯುವ ದಾರವ ಕಟ್ಟುತಲಿರುತಲಿ ಬಳಿಯಲಿ ನಿಂತಿಹ ತಂಗಿಯನು ಸೆಳೆಯುತ ತೆಕ್ಕೆಗೆ ಭರವಸೆ ಕೊಡುತಲಿ ಕಳೆವನು ಅವಳಾ ಭೀತಿಯನು ರಾಖಿಯ ದಾರವು ಬಂಧವ ಬೆಸೆಯುತ ಶೋಕವು ಕಳೆಯಿತು  ಮನದಲ್ಲಿ ನಾಕದಲೆಲ್ಲಾ ಹಬ್ಬುತ ಹರಡುತ ಜೇಕಿತು ಸಹೋದರತೆ ಮನದಲ್ಲಿ ಕಳಕಳಿ ತುಂಬಿದ ಅಣ್ಣನ ನೋಟವು ಕಳೆಯಿತು ತಂಗಿಯ ನೋವನ್ನು ಬೆಳೆಸಿತು ಪ್ರೀತಿಯ ಬಂಧವ ಬೆಸೆಯುತ ತಿಳಿಸುತ ಸಹೋದರ ಬಾಂಧವ್ಯವನು ಅಕ್ಷಯವಾಗಲಿ ಅಣ್ಣನ ಪ್ರೀತಿಯು ರಕ್ಷಣೆ ಕೊಡುತಲಿ  ಸಹೋದರಿಗೆ ತಕ್ಷಣ ಸೆಳೆಯುತ  ಮೈಮನ ಮರೆಯದೆ ಕಕ್ಷೆಯ ಹಾಕುತಿದೆ  ಕೈಗಳಿಗೆ ಪಂಕಜಾ. ಕೆ.  ರಾಮಭಟ್ ಮುಡಿಪು

ನಿರ್ಧಾರ ಕಥೆ

ನಿರ್ಧಾರ (ಸಣ್ಣ ಕಥೆ) ಇದು ಹಿರಿಯರು ನಿಶ್ಚಯಿಸಿದ ಮದುವೆ ಬೇಡ ಎಂದು ನಿರಾಕರಿಸಲು ನಾನೇನು ಕುಂಟನೆ ಕುರುಡನೆ? ಮಧು ತನ್ನಷ್ಟಕ್ಕೆ ಗೊಣಗಿದರೂ ಅದನ್ನು ಕೇಳಿಸಿಕೊಂಡ  ಶಾರ್ವರಿ ಅಯ್ಯೋ ಭಾವ ನೀವು ಕುರುಡರೂ ಅಲ್ಲ ಕುಂಟರೂ ಅಲ್ಲ ನಿಮ್ಮಂತಹ  ಉತ್ತಮ ಗುಣದ ಹುಡುಗ ಸಿಗಲು  ನಿಜಕ್ಕೂ ಪುಣ್ಯ ಮಾಡಿರಬೇಕು ಆದರೆ ನನ್ನ ಮನಸ್ಸಿನಲ್ಲಿರುವ  ಹುಡುಗನೇ ಬೇರೆ ದಯವಿಟ್ಟು ಅರ್ಥಮಾಡಿಕೊಳ್ಳಿ  ನೀವೇ ನನ್ನ ತಂದೆ ತಾಯಿಗೆ ಇದನ್ನು  ದಯವಿಟ್ಟು ತಿಳಿಸಬೇಕು   ಅಷ್ಟು ಹೇಳಿದ ಶಾರ್ವರಿ ಸರ ಸರ ಎಂದು ಅಲ್ಲಿಂದ ಸರಿದು ಹೋದಳು.             ಏನೂ ಮಾಡಲು ತೋರದೆ ಮಧು ಒಂದು ಕ್ಷಣ ಮೂಕನಂತೆ ನಿಂತು ಬಿಟ್ಟ ನಂತರ ಅಲ್ಲಿಂದ ತಾನೂ ಸರಿದು ಅಲ್ಲೇ ಹತ್ತಿರ ಇದ್ದ ದೇವಸ್ಥಾನಕ್ಕೆ ಬಂದು ದೇವರ ಗರ್ಭ ಗುಡಿಯ ಮುಂದೆ ನಿಂತು  ತನ್ನಲ್ಲೇ ಎನ್ನುವಂತೆ  ಯಾರಪ್ಪ ಈ ರೂಪಸಿಯ ಮನವನ್ನು ಕದ್ದವ ಎಂದು ಗೊಣಗಿಕೊಳ್ಳುತ್ತಿರುವಾಗಲೇ ತನ್ನ ಹತ್ತಿರ ನಿಂತು ದೇವರನ್ನು ಪ್ರಾರ್ಥಿಸುತ್ತಾ ಕೈ ಮುಗಿದು ಕಣ್ಣು ಮುಚ್ಚಿ ನಿಂತ ತರುಣನನ್ನು ಕಂಡು ಆತ ಒಂದು ಕ್ಷಣ ಮೋಡಿಗೊಳಗಾದವನಂತೆ ನಿಂತ ಅವನ ಮನ  ಈ ತರುಣನನ್ನು ಕಂಡರೆ ಬಹುಶಃ ಶಾರ್ವರಿ ಮೆಚ್ಚ ಬಹುದು  ಎಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಾರ್ವರಿ  ದೇವರಿಗೆ ಕೈ ಮುಗಿದು ನಿಂತ ಸಜನ್ ಹಾಗೂ ಅವನನ್ನೇ ನೋಡುತ್ತಾ ನಿಂ...

ಸುಂದರ ಪ್ರಕೃತಿ

ಸುಂದರ ಪ್ರಕೃತಿ      ಹಸಿರಿನ   ಮರಗಳು ಚಂದದಿ ನಲಿಯುತ ರಸಿಕರ ಕಂಗಳ ಸೆಳೆಯುತಿವೆ ಅರಳಿದ ಹೂಗಳು ಗಂಧವ  ಸೂಸುತ ದುಂಬಿಗಳನು ತಾ ಕರೆಯುತಿವೆ ಹರಿಯುವ ನದಿಗಳ ಮಂಜುಳ ಗಾನವು ಮೈಮನವನ್ನು ಮರೆಸುತಿವೆ ಗುಡ್ಡ  ಬೆಟ್ಟಗಳು ತುಂಬಿದ ಕಾನನ ಪ್ರಕೃತಿಯ ಸೊಬಗನು ತೋರುತಿವೆ ಬೀಸುವ ಗಾಳಿಯು ತಂಪನು ತರುತಲಿ ಮನಸಿನ ಬೇಸರ ಕಳೆಯುತಿದೆ ಬಾನಲಿ ಸರಿಯುವ ಬೆಳ್ಳಿಯ ಮೋಡವು ಮನದಲಿ ಕನಸನು ಬಿತ್ತುತಿದೆ ಮೋಡದ ಎಡೆಯಲಿ ಮಿನುಗುವ ಚಂದಿರ ಪ್ರೇಮಿಗಳ ಮನವನು ತಣಿಸುವನು ಮೂಡಣದಲ್ಲಿ ಮೂಡುವ ರವಿಯು  ಬೆಳಕನು ಜಗದೆಡೆ ಹರಿಸುವನು ಹಸಿರಿನ ಮಡಿಲಲಿ ಉಸಿರದು ತುಂಬಿದೆ ಕಸಿದಿದೆ ರಸಿಕರ ಮನವನು ಬಿಸಿಲಿನ ತಾಪವ ತಣಿಸುತಲಿರುವುದು ಬೀಸುತ ತಂಪಿನ ಗಾಳಿಯನು  ಶ್ರೀಮತಿ .ಪಂಕಜಾ.ಕೆ. ರಾಮಭಟ್

ಮುದ್ದು ಬಾಲಕೃಷ್ಣ

ಮುದ್ದು ಬಾಲಕೃಷ್ಣ ಭಕ್ತಿಗೀತೆ ಮುದ್ದು ಬಾಲಕೃಷ್ಣನಿವ  ಕದ್ದು ಬೆಣ್ಣೆ ತಿನ್ನುತಿರಲು ಸದ್ದು ಕೇಳಲೋಡಿ ಬಂದಳಮ್ಮನಲ್ಲಿಗೆ ಬಿದ್ದ ಗಡಿಗೆಯೊಳಗಿನಿಂದ ಮೆದ್ದು ಬೆಣ್ಣೆಯೆಲ್ಲವನ್ನು ಸದ್ದುಮಾಡದಂತೆ ನಿಂತು ತಾಯ ಕಾಡಿದ ದುಷ್ಠರನ್ನು ತರಿದು ಬಿಸುಡಿ  ಶಿಷ್ಟರನ್ನು  ರಕ್ಷಿಸುತ್ತ ಕಷ್ಟವನ್ನು ಕಳೆದ ನಮ್ಮ ಮುರಳಿ ಮಾಧವ ಪೂತನಿಯಾ ಹಾಲು ಕುಡಿದು ಕಾಳ ಸರ್ಪವನ್ನು ಮೆಟ್ಟಿ ಗೋವುಗಳನು ಕಾಯ್ದ ನಮ್ಮ ಗೋಪ ಬಾಲನು  ದುಷ್ಠ ಕಂಸನನ್ನು ಕೊಂದು  ರಕ್ಕಸರನು  ಮಟ್ಟ ಹಾಕಿ ಗೋಪಿಕೆಯರ ಜತೆಗೆ ನಲಿದ ಗೋಪಿಲೋಲನು ರಾಧೆಯೊಡನೆ ಸರಸವಾಡಿ  ತಾಯಿಯನ್ನು ಕಾಡಿಸುತ್ತ  ಬಾಯಿಯಲ್ಲಿ ಜಗವ ತೆರೆದ ಮಾಯಗಾರನು *ಶ್ರೀಮತಿ ಪಂಕಜಾ. ಕೆ.ರಾಮಭಟ್*